Category Archives: ಜೀವನದಿಗಳ ಸಾವಿನ ಕಥನ

“ಬಿಳಿಸಾಹೇಬನ ಭಾರತ” ಪುಸ್ತಕವಾಗಿ ಬರುತ್ತಿದೆ. ಅಭಿನಂದನೆಗಳು

ಆತ್ಮೀಯರೇ,

ನಿಮಗೆಲ್ಲರಿಗೂ ತಿಳಿದಿರಬಹುದು; 2011ರ ಡಿಸೆಂಬರ್‌ನಿಂದ 2012 ರ ಜುಲೈ ತನಕ, 29 ವಾರಗಳ ಕಾಲ, ನಮ್ಮ ಪ್ರೀತಿಯ ಲೇಖಕ ಜಗದೀಶ ಕೊಪ್ಪ ವರ್ತಮಾನ.ಕಾಮ್‌ನಲ್ಲಿ “ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ)”ವನ್ನು ಬರೆದರು. ವರ್ತಮಾನ.ಕಾಮ್‌ನ ಆರಂಭದ ದಿನಗಳಲ್ಲಿ ಅನೇಕ ಸರಣಿ ಲೇಖನಗಳನ್ನಷ್ಟೇ ಅಲ್ಲದೆ, ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜಗದೀಶ ಕೊಪ್ಪರು ನಿರಂತರವಾಗಿ ಬರೆದು ನಮಗೆ ಬೆನ್ನೆಲುಬಾಗಿ ನಿಂತು, ವರ್ತಮಾನ.ಕಾಮ್ ಬೇರೂರಿ ನಿಲ್ಲಲು ನೆರವಾದವರು. ಬಿಳಿ ಸಾಹೇಬನ ಭಾರತ, ನಕ್ಸಲ್ ಕಥನ, ಜೀವನದಿಗಳ ಸಾವಿನ ಕಥನ; ಈ ಮೂರು ಸರಣಿ ಲೇಖನಗಳು ಅಪಾರ ಓದುಗರನ್ನು ಗಳಿಸಿದ್ದವು. ಇದರಲ್ಲಿ ಈಗಾಗಲೆ ’ಜೀವನದಿಗಳ ಸಾವಿನ ಕಥನ’ ಮತ್ತು “ನಕ್ಸಲ್ ಕಥನ”ಗಳು ಇನ್ನೊಂದಷ್ಟು ಲೇಖನ-ಮಾಹಿತಿಗಳ ಜೊತೆಗೆ “ಜೀವನದಿಗಳ ಸಾವಿನ ಕಥನ” ಮತ್ತು “ಎಂದೂ ಮುಗಿಯದ ಯುದ್ಧ”ಗಳಾಗಿ ಪುಸ್ತಕಗಳಾಗಿಯೂ ಹೊರಬಂದಿದೆ.

ಈಗ, “ಬಿಳಿ ಸಾಹೇಬನ ಭಾರತ”ವೂ ಪುಸ್ತಕವಾಗಿ ಬರುತ್ತಿದೆ. ಈ ಸಂದರ್ಭದಲ್ಲಿ ಲೇಖಕ ಜಗದೀಶ ಕೊಪ್ಪರಿಗೆ koppa-Invitation-biLisahebaವರ್ತಮಾನ ಬಳಗದ ಪರವಾಗಿ ಧನ್ಯವಾದ, ಕೃತಜ್ಞತೆ, ಮತ್ತು ಅಭಿನಂದನೆಗಳನ್ನು ತಿಳಿಸುತ್ತೇವೆ. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇದೇ ಶನಿವಾರ ಸಂಜೆ 4:30ಕ್ಕೆ ಬೆಂಗಳೂರಿನಲ್ಲಿದೆ. ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ. ದಯವಿಟ್ಟು ಭಾಗವಹಿಸಿ.

ವಿಶ್ವಾಸದೊಂದಿಗೆ,
ರವಿ ಕೃಷ್ಣಾರೆಡ್ಡಿ
ವರ್ತಮಾನ ಬಳಗ



jeevanadigaLa-koppa


eMdU-mugiyada-yudda-koppa


biLisaheba-koppa

ಜೀವನದಿಗಳ ಸಾವಿನ ಕಥನ – ಅಂತಿಮ ಅಧ್ಯಾಯ (24)


– ಡಾ.ಎನ್.ಜಗದೀಶ್ ಕೊಪ್ಪ    


[ಗೆಳೆಯರೆ, ನಮ್ಮ ವರ್ತಮಾನ.ಕಾಮ್ ಆರಂಭವಾದ ಒಂದು ತಿಂಗಳ ಒಳಗೇ ಆರಂಭವಾದ (4/9/2011) ಜಗದೀಶ್ ಕೊಪ್ಪರ ಈ ಲೇಖನ ಸರಣಿ ತನ್ನ ನಿಲುವು ಮತ್ತು ಅಧ್ಯಯನಶೀಲತೆಯಿಂದ ನಮ್ಮನಿಮ್ಮೆಲ್ಲರನ್ನು ಪ್ರಭಾವಿಸಿದ್ದು ಮಾತ್ರವಲ್ಲದೆ, ಚಿಂತನೆಗೂ ಹಚ್ಚಿತ್ತು. ಇಂದಿನದು ಆ ಸರಣಿಯ ಅಂತಿಮ ಅಧ್ಯಾಯ. ವರ್ತಮಾನ.ಕಾಮ್‌ನಲ್ಲಿ ಇದನ್ನು ಪ್ರಥಮ ಬಾರಿಗೆ ಪ್ರಕಟಿಸಲು ಇಚ್ಚಿಸಿದ್ದಕ್ಕಾಗಿ ಶ್ರೀ ಜಗದೀಶ್ ಕೊಪ್ಪರವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಆದಷ್ಟು ಬೇಗ ಇದು ಪುಸ್ತಕರೂಪದಲ್ಲಿಯೂ ಬಂದು ಇನ್ನೂ ಹೆಚ್ಚು ಜನರನ್ನು ತಲುಪಲಿ ಎಂದು ಆಶಿಸುತ್ತೇನೆ. ಹಾಗೆಯೇ, ಅಂತರ್ಜಾಲದಲ್ಲಿನ ನಮ್ಮ ವರ್ತಮಾನ.ಕಾಮ್ ಪ್ರಯತ್ನಕ್ಕೆ ಮೊದಲಿನಿಂದಲೂ ಕ್ರಿಯಾಶೀಲವಾಗಿ ಬೆಂಬಲಿಸುತ್ತ ಬಂದಿರುವ ಜಗದೀಶ್ ಕೊಪ್ಪರ ಸಹಾಯ ದೊಡ್ಡದು. ಮತ್ತೊಮ್ಮೆ ಅವರಿಗೆ ಧನ್ಯವಾದಗಳು ಮತ್ತು ಕನ್ನಡದಲ್ಲಿ ಇಂತಹುದೊಂದು ಅಪರೂಪದ ವಿಷಯದ ಬಗ್ಗೆ ಬರೆದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. -ರವಿ…]

ಜಗತ್ತಿನ ನದಿಗಳ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಬದ್ಧತೆ, ಕಾಳಜಿ ಹಾಗೂ ಸ್ವಾಭಿಮಾನದ ಮೂಲಕ ಘನತೆ ತಂದುಕೊಟ್ಟವರು ಬ್ರೆಜಿಲ್ ಮತ್ತು ಭಾರತದ ಪರಿಸರವಾದಿ ಸತ್ಯಾಗ್ರಾಹಿಗಳು. ತಮ್ಮ ಎದೆಯೊಳಗಿನ ಕಿಚ್ಚು ಮತ್ತು ಸಂಕಟಗಳನ್ನು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿ ಅಣೆಕಟ್ಟುಗಳ ವಿರುದ್ಧದ ಹೋರಾಟಕ್ಕೆ ಎಲ್ಲರನ್ನೂ ಕ್ರೂಢೀಕರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬ್ರೆಜಿಲ್ ದೇಶದ ಮೂಲ ನಿವಾಸಿಗಳು ಮತ್ತು ಭಾರತದ ನರ್ಮದಾ ಬಚಾವ್ ಆಂದೋಲನದ ಚಳವಳಿಗಾರರು ತಮ್ಮ ಅವಿರತ ಪ್ರತಿಭಟನೆಯ ಮೂಲಕ ವಿಶ್ವದ ಗಮನ ಸೆಳೆದರು ಅಲ್ಲದೆ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿ ಪರಿಸರವಾದಿಗಳಿಗೆ ಸ್ಪೂರ್ತಿಯಾಗಿ ನಿಂತರು.

ಅದು 1989ರ ಪಬ್ರವರಿ ತಿಂಗಳಿನ ಮೊದಲ ವಾರದ ಒಂದು ದಿನ. ಬ್ರೆಜಿಲ್ ಈಶಾನ್ಯ ಭಾಗದ ಅಮಜೋನಿಯಾ ಪ್ರಾಂತ್ಯದ ಅಲ್ಟಮಿರಾ ಎಂಬ ಪಟ್ಟಣದ ಸಮುದಾಯ ಭವನದಲ್ಲಿ ಅಲ್ಲಿನ 20ಕ್ಕು ಹೆಚ್ಚಿನ ಬುಡಕಟ್ಟು ಜನಾಂಗದ ಪ್ರತಿನಿಧಿಗಳು ಹಾಗೂ ಸರ್ಕಾರದ ಅಧಿಕಾರಿಗಳ ನಡುವೆ ಸಂಧಾನ ಸಭೆ ಏರ್ಪಟ್ಟಿತ್ತು. ಸಮಾರು ಒಂದು ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದ ಆ ಸಭೆಯಲ್ಲಿ ಬ್ರೆಜಿಲ್ ಸರ್ಕಾರದ ಅಣೆಕಟ್ಟು ನಿರ್ಮಾಣ ಹಾಗೂ ವಿದ್ಯುತ್ ಉತ್ಪಾದನೆಯ ಉಸ್ತುವಾರಿ ಹೊತ್ತಿದ್ದ ಮುಖ್ಯ ಇಂಜಿನಿಯರ್ ಸರ್ಕಾರದ ರೂಪು ರೇಷೆ ಮತ್ತು ಪುನರ್ವಸತಿ ಕುರಿತಂತೆ, ಸರ್ಕಾರ ನೀಡುವ ಪರಿಹಾರ ಧನ ಕುರಿತಂತೆ ಮಾತನಾಡುತಿದ್ದ. ಆ ದೇಶದ ಎಲ್ಲಾ ಸುದ್ಧಿ ಮಾಧ್ಯಮಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು. ಬ್ರೆಜಿಲ್‌ನ ಮುಖ್ಯ ನದಿಗಳಲ್ಲಿ ಒಂದಾದ ಕ್ಷಿಂಗು ನದಿಗೆ ಕಟ್ಟಲಾಗುವ ಅಣೆಕಟ್ಟುಗಳು, ಹಿನ್ನೀರಿನಲ್ಲಿ ಮುಳುಗಡೆಯಾಗುವ ಅರಣ್ಯಪ್ರದೇಶ, ವಸತಿ ಪ್ರದೇಶದ ವಿವರ, ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಇವುಗಳ ಕುರಿತು ಸ್ಥಳೀಯ ಮೂಲನಿವಾಸಿಗಳಿಗೆ ಸವಿವರವಾಗಿ ಮನದಟ್ಟು ಮಾಡಿಕೊಡುತಿದ್ದ.

ಆ ಸಭೆಯಲ್ಲಿ ಕುಳಿತಿದ್ದ ಕಯಾಪು ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳು ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕುಡುಗೋಲು ಆಕಾರದ ಆಯುಧದೊಂದಿಗೆ ಮುಂದೆ ಬಂದು ಅದನ್ನು ನೇರವಾಗಿ ಮುಖ್ಯ ಇಂಜಿನಿಯರ್ ಆಂಟೋನಿಯಾ ಎಂಬಾತನ ಕುತ್ತಿಗೆಗೆ ಹಿಡಿದು, “ನೀನೊಬ್ಬ ಅಪ್ಪಟ ಸುಳ್ಳುಗಾರ, ನಮಗೆ ನಿನ್ನ ವಿದ್ಯುತ್ ಬೇಕಾಗಿಲ್ಲ ನಿನ್ನ ವಿದ್ಯುತ್‌ನಿಂದ ನಮಗೆ ಆಹಾರ ದಕ್ಕುವುದಿಲ್ಲ. ನಮಗೆ ಆಹಾರ ಸಿಗುವುದು ನೀನು ಮುಳುಗಡೆ ಮಾಡಲಿರುವ ಅರಣ್ಯದಿಂದ. ಅದು ನಮ್ಮನ್ನು ಪೊರೆಯುವ ತಾಯಿ. ಈ ಅರಣ್ಯ ಹೀಗೆ ಇರಬೇಕು, ಈ ನದಿ ಇದೇ ರೀತಿ ಹರಿಯಬೇಕು,” ಎಂದು ಅವನು ತೋರಿಸುತಿದ್ದ ನಕಾಶೆಯತ್ತ ಕೈ ಮಾಡಿ ದೊಡ್ಡ ಗಂಟಲಿನಲ್ಲಿ ಬಡಬಡಸಿದಳು. ಇಡೀ ದೃಶ್ಯ ಟಿ.ವಿ. ಚಾನಲ್ ಗಳಲ್ಲಿ ನೇರಪ್ರಸಾರವಾಗುತಿತ್ತು. ಆತ ಸ್ತಂಭೀಭೂತನಾಗಿ ಮಾತಿಲ್ಲದೆ, ಬೆವರುತ್ತಾ ನಿಂತಿದ್ದ. ಈ ಬುಡಕಟ್ಟು ಮಹಿಳೆಯ ಸಿಟ್ಟು ಕೇವಲ ಅವಳೊಬ್ಬಳ ಒಡಲಾಳದ ಸಂಕಟವಾಗಿರಲಿಲ್ಲ. ಅದು ಇಡೀ ಬ್ರೆಜಿಲ್ ದೇಶದ ಮೂಲನಿವಾಸಿಗಳ ಆಕ್ರೋಶದ ಧ್ವನಿಯಾಗಿತ್ತು.

ಕ್ಷಿಂಗ್ ನದಿಯ ಹರಿವಿನುದ್ದಕ್ಕು ಒಟ್ಟು ಆರು ಅಣೆಕಟ್ಟುಗಳನ್ನ ನಿಮಿಸಲು ಬ್ರೆಜಿಲ್ ಸರ್ಕಾರ ಯೋಜನೆಗಳನ್ನ ರೂಪಿಸಿತ್ತು. ಇವುಗಳಲ್ಲಿ 11 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾನೆಯೂ ಸೇರಿತ್ತು. ಈ ಯೋಜನೆಗಳಿಗಾಗಿ ಅಪರೂಪದ ಸಾವಿರಾರು ಹೆಕ್ಟೇರ್ ಮಳೆಕಾಡು ಹಿನ್ನೀರಿನಲ್ಲಿ ಮುಳುಗಡೆಯಾಗುವುದು ಮತ್ತು ಅನೇಕ ಬುಡಕಟ್ಟು ಜನಾಂಗಗಳು ನಿರ್ವಸತಿರಾಗುವುದು ಅನಿವಾರ್ಯವಾಗಿತ್ತು. ಅಭಿವೃದ್ಧಿಯ ಅಂಧಯುಗಲ್ಲಿ ಸಾಗುತಿದ್ದ ಅಲ್ಲಿನ ಸರ್ಕಾರಕ್ಕೆ ನೂರಾರು ವರ್ಷಗಳಿಂದ ಅರಣ್ಯದಲ್ಲಿ ಪರಿಸರಕ್ಕೆ ಮಾರಕವಾಗದಂತೆ ಜೀವಿಸಿದ್ದ ಮೂಲನಿವಾಸಿಗಳು ತೃಣಸಮಾನರಾಗಿದ್ದರು ಯಾವ ಕ್ಷಣದಲ್ಲಿ ಬೇಕಾದರೂ ಇವರನ್ನು ಹೊಸಕಿ ಹಾಕಬಹುದು ಎಂಬ ಅಹಂಕಾರವನ್ನ ಬ್ರೆಜಿಲ್ ಸರ್ಕಾರ ಬೆಳೆಸಿಕೊಂಡಿತ್ತು.

ಇದಕ್ಕು ಮುನ್ನ ಸರ್ಕಾರ ಸ್ಥಳೀಯ ನದಿಯೊಂದಕ್ಕೆ ಟುಕುರ್ವ ಎಂಬ ಅಣೆಕಟ್ಟನ್ನು ನಿರ್ಮಿಸಿ ಅಲ್ಲಿನ ಸ್ಥಳೀಯ ನಿವಾಸಿಗಳಾದ ಗೇವಿಯೊ ಎಂಬ ಬುಡಕಟ್ಟು ಜನಾಂಗಕ್ಕೆ ಆಸೆ ಆಮಿಷಗಳನ್ನು ತೋರಿಸಿ ಅವರನ್ನು ಒಕ್ಕಲೆಬ್ಬಿಸಿತ್ತು. ಆ ಜನಾಂಗದ ನಾಯಕನೊಬ್ಬ ಸಭೆಗೆ ಆಗಮಿಸಿ ತನ್ನ ಜನಾಂಗದ ಬದುಕು ಮೂರಾಬಟ್ಟೆಯಾದುದನ್ನು ಹೃದಯಕ್ಕೆ ನಾಟುವಂತೆ ವಿವರಿಸಿದ್ದ.

ಅಂತಿಮವಾಗಿ ಬ್ರೆಜಿಲ್‌ನ ಬುಡಕಟ್ಟು ಜನಾಂಗದ ನಾಯಕರು ಒಗ್ಗೂಡಿ, ಅಮೇರಿಕಾಕ್ಕೆ ತೆರಳಿ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ವಿಶ್ವಬ್ಯಾಂಕ್ ಅಧಿಕಾರಿಗಳನ್ನ ಬೇಟಿಮಾಡಿ ಸರ್ಕಾರದ ವಂಚನೆಯನ್ನ ವಿವರಿಸಿ, ಅಣೆಕಟ್ಟುಗಳ ವಿಷಯವಾಗಿ ಬ್ರೆಜಿಲ್ ಸರ್ಕಾರಕ್ಕೆ ಯಾವುದೇ ಆರ್ಥಿಕ ನೆರವು ನೀಡದಂತೆ ಮನವಿ ಸಲ್ಲಿಸಿದರು.ಇದರಿಂದ ಆಕ್ರೋಶಗೊಂಡ ಬ್ರೆಜಿಲ್ ಸರ್ಕಾರ ಆ ಮೂವರು ನಾಯಕರ ಮೇಲೆ ದೇಶದ್ರೋಹದ ಆರೋಪ ಹೊರಿಸಿತು. ಅಲ್ಲದೆ ವಿದೇಶಿಯರು ನಡೆಸಬಹುದಾದ ಬುಡಮೇಲು ಕೃತ್ಯದಂತಹ ಗುರುತರ ಆರೋಪ ಪಟ್ಟಿಯನ್ನು ನ್ಯಾಯಲಯಕ್ಕೆ ಸಲ್ಲಿಸಿತು.ಈ ಘಟನೆ ಸಹಜವಾಗಿ ಬ್ರೆಜಿಲ್‌ನ ಎಲ್ಲಾ ನಾಗರೀಕರನ್ನು ಕೆರಳಿಸಿತು. ಅಲ್ಲಿನ ಟಿ.ವಿ.ಚಾನಲ್ ಒಂದರ ನಿರೂಪಕ ಸಚಿವನೊಬ್ಬನನ್ನು ಚರ್ಚೆಗೆ ಆಹ್ವಾನಿಸಿ, ಬುಡಕಟ್ಟು ಜನಾಂಗದ ನಾಯಕರು ವಿದೇಶಿ ಪ್ರಜೆಗಳಾದರೆ, ಇಲ್ಲಿ ಚರ್ಚೆ ಮಾಡುತ್ತಿರುವ ನಾನು ನೀವು ಯಾವ ದೇಶದ ಪ್ರಜೆಗಳು ಎಂದು ಪ್ರಶ್ನೆ ಹಾಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ. ಈ ದೃಶ್ಯವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದ ಅಲ್ಲಿನ ಪ್ರಜೆಗಳು ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ಅಂತಿಮವಾಗಿ ಮೂಲನಿವಾಸಿಗಳ ಮತ್ತು ಜನಗಳ ಒತ್ತಾಯಕ್ಕೆ ಮಣಿದ ಬ್ರೆಜಿಲ್ ಸರ್ಕಾರ ಆರು ಅಣೆಕಟ್ಟುಗಳ ಯೋಜನೆಯನ್ನು ರದ್ದುಪಡಿಸಿತು. ಇದರಿಂದಾಗಿ 7.200 ಹೆಕ್ಟೇರ್ ಪ್ರದೇಶದ ಮಳೆಕಾಡು ಹಾಗೂ ಅರಣ್ಯದೊಳಗೆ ವಾಸವಾಗಿದ್ದ 20 ಕ್ಕೂ ಹೆಚ್ಚು ಬುಡಕಟ್ಟು ಜನಾಂಗ ಹಿನ್ನೀರಿನಲ್ಲಿ ಮುಳುಗುವುದರಿಂದ ಪಾರಾದವು.

ದಕ್ಷಿಣ ಏಷ್ಯಾದ ಸುಂದರ ಭೌಗೋಳಿಕ ಪ್ರದೇಶಗಳಿಂದ, ಅಲ್ಲಿನ ಕಡಲ ತೀರಗಳಿಂದ, ಹೆಸರುವಾಸಿಯಾದ ಥಾಯ್ಲೆಂಡ್ ದೇಶ ಇತ್ತೀಚಿಗೆ ಪ್ರವಾಸೋದ್ಯಮದ ಮೂಲಕ ಜಗತ್ತಿನ ಗಮನ ಸೆಳೆದಿದೆ. 1980ರಿಂದ ಅಲ್ಲಿ ತೀವ್ರಗೊಂಡ ಉದ್ಯಮೀಕರಣದಿಂದ ವಿದ್ಯುತ್ ಬೇಡಿಕೆ ಹೆಚ್ಚಾಯಿತು. ಈ ಕಾರಣಕ್ಕಾಗಿ ಥಾಯ್ಲೆಂಡ್ ಸರ್ಕಾರ 1982ರಲ್ಲಿ ವಿಶ್ವಬ್ಯಾಂಕ್ ಹಾಗೂ ಜಪಾನ್ ಸರ್ಕಾರದ ನೆರವಿನಿಂದ ಅಲ್ಲಿನ ಪ್ರಸಿದ್ದ ಕ್ವಾಯ್ ನದಿಗೆ 187 ಮೀಟರ್ ಎತ್ತರದ ನಾಮ್ ಚೋನ್ ಎಂಬ ಅಣೆಕಟ್ಟು ನಿರ್ಮಿಸಲು ಆರಂಭಿಸಿತು. ಈ ಅಣೆಕಟ್ಟಿನ ಹಿನ್ನೀರಿನಲ್ಲಿ 75 ಕಿ.ಮಿ. ವ್ಯಾಪ್ತಿಯ ಅಭಯಾರಣ್ಯ ಹಾಗೂ ಆನೆಗಳು ಚಲಿಸುವ ಕಾರಿಡಾರ್ ಮುಳುಗುವ ಸಂಭವ ಹೆಚ್ಚಾಯಿತು. ಜೊತೆಗೆ ಎರಡು ಸಾವಿರ ಕರೇನ್ ಎಂಬ ಮೀನುಗಾರಿಕೆಯನ್ನ ಕಸಬಾಗಿಸಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಸಹ ಒಕ್ಕಲೆಬ್ಬಿಸಲು ಸರ್ಕಾರ ನೊಟೀಸ್ ಜಾರಿ ಮಾಡಿತ್ತು. ಈ ಅಭಯಾರಣ್ಯದಲ್ಲಿ ಅಪರೂಪದ ಪಕ್ಷಿ ಸಂಕುಲವಿದ್ದುದನ್ನು ಮನಗಂಡಿದ್ದ ಬ್ರಿಟನ್ ರಾಜಕುಮಾರ ಪ್ರಿನ್ಸ್ ಪಿಲಿಪ್ ಹಾಗೂ ಅವನ ಪುತ್ರ ಪ್ರಿನ್ಸ್ ಚಾರ್ಲ್ಸ್ ಅಭಯಾರಣ್ಯದ ರಕ್ಷಣೆಗೆ ಆರ್ಥಿಕ ನೆರವು ನೀಡಿದ್ದರು. ಇವೆಲ್ಲವನ್ನು ಲೆಕ್ಕಿಸದ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾದಾಗ ಅಲ್ಲಿನ ವಿದ್ಯಾರ್ಥಿ ಸಂಘಟನೆ, ನಾಗರೀಕರು, ಪರಿಸರವಾದಿಗಳು ಪ್ರತಿಭಟನೆಗೆ ಮುಂದಾದರು. ಇವರುಗಳಿಗೆ ರಾಜಧಾನಿ ಬ್ಯಾಂಕಾಕ್‌ನ ಸ್ವಯಂ ಸೇವಾ ಸಂಘಟನೆ ನೆರವಿಗೆ ಬಂದಿತು. ನಾಮ್ಚೋನ್ ಅಣೆಕಟ್ಟು ಮತ್ತು ಇದರಿಂದ ಸೃಷ್ಟಿಯಾಗುವ ಜಲಾಶಯದಿಂದ ಆಗುವ ದುಷ್ಪಾರಿಣಾಮಗಳ ಕುರಿತು ವಿಸ್ತೃತ ಅಧ್ಯಯನ ನಡೆಸಿ ವರದಿಯನ್ನ ಹೊರಜಗತ್ತಿಗೆ ಬಿಡುಗಡೆ ಮಾಡಿತು. ನಂತರ ಅಣೆಕಟ್ಟಿನ ವಿರುದ್ಧ ಸ್ಥಳೀಯವಾಗಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ಎದುರಾದಾಗ ಥಾಯ್ಲೆಂಡ್ ಸರ್ಕಾರ ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಮಾರಕವಾಗುವ ಯಾವುದೇ ಅಣೆಕಟ್ಟುಗಳನ್ನು ನಿರ್ಮಿಸುವುದಿಲ್ಲ ಎಂದು ಘೋಷಿಸಿತು. ಥಾಯ್ಲೆಂಡ್ ನಾಗರೀಕರ ಈ ಹೋರಾಟ ನೆರೆಯ ಬರ್ಮಾ, ಕಾಂಬೋಡಿಯ, ಲಾವೋಸ್ ರಾಷ್ಟ್ರಗಳ ನಾಗರೀಕರಿಗೆ ಸ್ಪೂರ್ತಿ ನೀಡಿತು.

ಭಾರತದಲ್ಲಿ ಅಣೆಕಟ್ಟುಗಳ ವಿರುದ್ಧದ ಪ್ರತಿಭಟನೆ ಪ್ರಾರಂಭವಾದದ್ದು 1946ರಲ್ಲಿ ಆರಂಭವಾದ ದೇಶದ ಪ್ರಥಮ ಹಿರಾಕುಡ್ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ. ಅಲ್ಲಿನ ಸಂತ್ರಸ್ತರ ಪ್ರತಿಭಟನೆಯನ್ನ ಪೊಲಿಸರು ಲಾಠಿಚಾರ್ಜ್ ಮಾಡುವುದರ ಮೂಲಕ ಹತ್ತಿಕ್ಕಿದರು. 1978ರಲ್ಲಿ ಬಿಹಾರದ ಸುವರ್ಣರೇಖ ನದಿಗೆ ಕಟ್ಟಲಾದ ಚಾಂಡಿಲ್ ಅಣೆಕಟ್ಟು ಅನೇಕ ಹಿಂಸೆ ಸಾವು ನೋವಿಗೆ ಕಾರಣವಾಯಿತು. ಭಾರತದಲ್ಲೆ ಪ್ರಥಮ ಬಾರಿಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಿ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿದರು. 1982ರಲ್ಲಿ 8 ಸಾವಿರ ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ನಡೆದ ಘರ್ಷಣೆಯಲ್ಲಿ ಪೋಲಿಸರ ಗುಂಡಿಗೆ ಮೂವರು ಬಲಿಯಾದರು. ಘಟನೆಯ ನಂತರ ಸಂತ್ರಸ್ತರಿಗೆ ನೀಡುವ ಪರಿಹಾರ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣನೆ ಮಾಡತೊಡಗಿತು.

ಇದಾದ ನಂತರ ಅಣೆಕಟ್ಟುಗಳ ವಿರುದ್ಧ ವಿರೋಧ ಇವತ್ತಿಗೂ ಮುಂದುವರಿದುಕೊಂದು ಬಂದಿದೆ, ಪಶ್ಚಿಮ ಹಿಮಾಲಯದ ತೆಹ್ರಿ ಅಣೆಕಟ್ಟು ವಿಷಯದಲ್ಲಿ ಅಲ್ಲಿನ ಪರಿಸರವಾದಿ ಹಾಗೂ ಮರಗಳ ರಕ್ಷಣೆಗಾಗಿ ಅಪ್ಪಿಕೊ ಚಳುವಳಿಯನ್ನು ಹುಟ್ಟು ಹಾಕಿದ ನೇತಾರ ಸುಂದರ್ ಲಾಲ್ ಬಹುಗುಣ ಇವರ ಪ್ರಬಲ ವಿರೋಧದ ಫಲವಾಗಿ ಅಣೆಕಟ್ಟು ಸಾಧ್ಯವಾಗಿಲ್ಲ.

ಭಾರತದ ಪರಿಸರವಾದಿಗಳಿಗೆ ನೈತಿಕ ವಿಜಯವನ್ನು ಕೇರಳದ ಮೌನ ಕಣಿವೆಯ ಅಣೆಕಟ್ಟು ತಂದಿಕೊಟ್ಟಿತು. 1980ರ ದಶಕದಲ್ಲಿ 120 ಮೀಟರ್ ಎತ್ತರದ ಅಣೆಕಟ್ಟನ್ನು ಕೇರಳದ ಇಡುಕ್ಕಿ ಜಿಲ್ಲೆಯ ಮೌನಕಣಿವೆಯಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಹೊರಟಾಗ ಪಶ್ಚಿಮಘಟ್ಟದ ಜೀವ ಸಂಕುಲಗಳ ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಎಲ್ಲಾ ವರ್ಗದ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ 1983ರಲ್ಲಿ ಅಂದಿನ ಪ್ರದಾನಿ ಇಂದಿರಾಗಾಂಧಿ ಯೋಜನೆಯನ್ನ ರದ್ದುಪಡಿಸಿದರು.

ಭಾರತದ ಅಣೆಕಟ್ಟುಗಳ ಪ್ರತಿಭಟನೆಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವೆಂದರೆ ನರ್ಮದಾ ಬಚಾವ್ ಆಂಧೋಲನ. ಮಹರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳ ನಡುವೆ ಹರಿಯುವ ನರ್ಮದಾ ನದಿಗೆ ಕಟ್ಟಲಾಗುತ್ತಿರುವ ಅಣೆಕಟ್ಟುಗಳ ವಿರುದ್ಧ ದನಿಯೆತ್ತಿ ನಿರಾಶ್ರಿತರ ಪರವಾಗಿ ಹೋರಾಡುತ್ತಾ ಹೋರಾಟಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟ ಕೀರ್ತಿ ಮೇಧಾ ಪಾಟ್ಕರ್‌ರಿಗೆ ಸಲ್ಲುತ್ತದೆ.

1985 ರಲ್ಲಿ 30 ವರ್ಷ ವಯಸ್ಸಿನ ಮೇಧಾ ಪಾಟ್ಕರ್ ನರ್ಮದಾ ಅಣೆಕಟ್ಟಿನಿಂದ ಮುಳುಗಡೆಯಾಗುವ ಹಳ್ಳಿಗಳ ಅಧ್ಯಯನಕ್ಕೆ ಬಂದವರು, ಅಲ್ಲಿನ ಹಳ್ಳಿಗರ ನೋವು, ಆಕ್ರಂದನ, ಸರ್ಕಾರದ ಅಧಿಕಾರಿಗಳ ಶೋಷಣೆಯನ್ನ ಸಹಿಸಲಾರದೆ ನಿರಾಶ್ರಿತರ ಪರವಾಗಿ ಅಧ್ಯಯನ ಕೈಬಿಟ್ಟು ಹೋರಾಟಕ್ಕೆ ನಿಂತರು. ಸತತ 27 ವರ್ಷಗಳಿಂದ ಮನೆ ಮಠ ತೊರೆದು, ಅವಿವಾಹಿತರಾಗಿ ಉಳಿದು ಹೋರಾಟ ನಡೆಸುತ್ತಿರುವ ಮೇಧಾರಿಂದ ಸ್ಫೂರ್ತಿ ಪಡೆದ ಅನೇಕ ಇಂಜಿನಿಯರ್‌ಗಳು, ವೈದ್ಯರು, ಸಾಮಾಜಿಕ ಸೇವಾಕರ್ತರು ಇವರ ಜೊತೆ ಕೈಜೋಡಿಸಿದ್ದಾರೆ.. ಈ ಹೋರಾಟಕ್ಕೆ ಅನೇಕ ಮಗ್ಗಲುಗಳಿದ್ದು ಆಸಕ್ತರು ಲೇಖಕಿ ಅರುಂಧತಿರಾಯ್ ರವರ “ದ ಗ್ರೇಟರ್ ಕಾಮನ್ ಗುಡ್” ಕೃತಿಯನ್ನು ಅವಲೋಕಿಸಬಹುದು. (ಪ್ರಕಾಶಕರು: ಇಂಡಿಯಾ ಬುಕ್ ಹೌಸ್-1999)

ಸಮಾರು 200 ಕಿಲೋಮೀಟರ್ ಪಾದಯಾತ್ರೆ ಮಾಡಿ ನಿರಾಶ್ರಿತರ ಬವಣೆಗಳನ್ನ ಅರಿತ ಮೇಧಾ ನರ್ಮದಾ ಕಣಿವೆಯಲ್ಲಿರುವ ಆದಿವಾಸಿಗಳಿಗೆ ಬದುಕು ಕಟ್ಟಿಕೊಡಲು ನಡೆಸಿದ ಹೋರಾಟ ವಿಶ್ವಾದ್ಯಂತ ಪ್ರಸಿದ್ಧಿಯಾಗಿದೆ. ಇವರ ಹೋರಾಟಕ್ಕೆ ಮಣಿದ ವಿಶ್ವಬ್ಯಾಂಕ್ ಕೆಲವು ವರ್ಷಗಳ ಕಾಲ ಆರ್ಥಿಕ ನೆರವನ್ನ ತಡೆಹಿಡಿತ್ತು.

ಸರ್ಕಾರದ ಸುಳ್ಳು ಮಾಹಿತಿಗಳು, ಪರಿಹಾರದಲ್ಲಿ ಮಾಡಲಾದ ವಂಚನೆಗಳು ಇವಲ್ಲವನ್ನೂ ಅಮೇರಿಕಾಕ್ಕೆ ತೆರಳಿ ವಿಶ್ವಬ್ಯಾಂಕ್‌ಗೆ ಮನದಟ್ಟು ಮಾಡಿಕೊಟ್ಟು ಬಂದ ದಿಟ್ಟ ಹೆಣ್ಣು ಮಗಳು ಈಕೆ. ಈಗ ನರ್ಮದಾ ಸರೋವರ ಅಣೆಕಟ್ಟಿನ ಎತ್ತರವನ್ನು 63 ಮೀಟರ್‌ಗಿಂತ ಹೆಚ್ಚು ಮಾಡಕೂಡದೆಂಬ ಎಚ್ಚರಿಕೆಯನ್ನು ಗುಜರಾತ್ ಸರ್ಕಾರಕ್ಕೆ ರವಾನಿಸಿರುವ ಮೇಧಾ ಪಾಟ್ಕರ್ ತಮ್ಮ ಹೋರಾಟವನ್ನು ಇಂದಿಗೂ ಮುಂದುವರಿಸಿ ಜಗತ್ತಿನ ಅನೇಕ ರಾಷ್ಟ್ರಗಳ ಹೋರಾಟಗಾರರಿಗೆ ಮಾದರಿಯಾಗಿ ನಿಂತಿದ್ದಾರೆ.

ಜೀವನದಿಗಳ ರಕ್ಷಣೆ ಮತ್ತು ಅಣೆಕಟ್ಟುಗಳ ವಿರೋಧಕ್ಕೆ ಅಂತರಾಷ್ಟ್ರೀಯ ವೇದಿಕೆ ನಿರ್ಮಾಣ ಮಾಡಿಕೊಟ್ಟವರೆಂದರೆ, ಎಡ್ವರ್ಡ್ ಗೊಲ್ಡ್‌ಸ್ಮಿತ್ ಮತು ನಿಕೊಲಸ್ ಹಿಲ್ಡ್‌ಯಾರ್ಡ್. ಈ ಇಬ್ಬರು ಮಹನೀಯರು ಸೇರಿ 1984ರಲ್ಲಿ ರಚಿಸಿದ “ದ ಸೊಷಿಯಲ್ ಅಂಡ್ ಎನ್ವಿರಾನ್ಮೆಂಟಲ್ ಎಪೆಕ್ಟ್ಸ್ ಆಪ್ ಲಾರ್ಜ್ ಡ್ಯಾಮ್ಸ್” ಕೃತಿ ಪರಿಸರವಾದಿಗಳಿಗೆ ಆಧಾರವಾಯಿತು. ಈ ಇಬ್ಬರು ಲೇಖಕರು ತಾವು ಸಂಪಾದಕರಾಗಿದ್ದ “ದ ಎಕಾಲಜಿಸ್ಟ್” ಪತ್ರಿಕೆಯಲ್ಲಿ ಕೂಡ ನಿರಂತರ ಲೇಖನಗಳನ್ನು ಬರೆದು ಅಣೆಕಟ್ಟುಗಳ ಕ್ರೂರ ಇತಿಹಾಸವನ್ನು ಬಿಚ್ಚಿಟ್ಟರು. ಇದರಿಂದಾಗಿ “ಇಂಟರ್‌ನ್ಯಾಷನಲ್ ರಿವರ್ ನೆಟ್ವರ್ಕ್” ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬರಲು ಕಾರಣವಾಯಿತು.

ಈಗ ಜಗತ್ತಿನಾದ್ಯಂತ ಅಣೆಕಟ್ಟು ಕುರಿತಂತೆ ಸರ್ಕಾರಗಳಿಗೆ ಇದ್ದ ಕುರುಡು ನಂಬಿಕೆ ಅಳಿಸಿಹೋಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿದೆ. ಸಣ್ಣದು ಸುಂದರ ಎಂಬ ಪ್ರಸಿದ್ಧ ಅರ್ಥಶಾಸ್ತ್ರಜ್ಙ ಶೂಮಾಕರ್ನ ತತ್ವ ಅರಿವಾಗತೊಡಗಿದೆ. ಹಾಗಾಗಿ ಜೀವನದಿಗಳ ಮಾರಣ ಹೋಮಕ್ಕೆ ತಡೆಯುಂಟಾಗಿದೆ. ಇದು ಪೂರ್ಣ ಪ್ರಮಾಣದಲ್ಲಿ ಇನ್ನೂ ಸಾಧ್ಯವಾಗಿಲ್ಲ. ಕಮ್ಯುನಿಸ್ಟ್ ಪ್ರಭುತ್ವ ಇರುವ ಚೀನಾ ದೇಶದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಿ ಅಣೆಕಟ್ಟುಗಳನ್ನು ಸಮರೋಪಾದಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆ ಇತ್ತೀಚಿಗೆ ಬಿಡುಗಡೆಯಾದ ಲೇಖಕ ಬ್ರಹ್ಮ ಚೆಲ್ಲನೀ ಅವರ “ವಾಟರ್: ಏಷ್ಯಾಸ್ ನ್ಯೂ ಬ್ಯಾಟಲ್‌ಗ್ರೌಂಡ್” ಕೃತಿಯಲ್ಲಿ ಸವಿವರವಾಗಿ ವಿವರಿಸಲಾಗಿದೆ.

ಒಟ್ಟಾರೆ ಹಲವು ತ್ಯಾಗಮಯಿ ಜೀವಿಗಳಿಂದ, ಈ ನೆಲದ ಮೆಲಿನ ಅಕ್ಕರೆಯಿಂದ, ಇಲ್ಲಿ ನೆಲ ಜಲ ನಮ್ಮ ಪಾಲಿಗೆ, ನಮ್ಮ ಮುಂದಿನ ತಲೆಮಾರಿಗೆ ಉಳಿದುಕೊಂಡಿವುದು ನಮ್ಮ ಪುಣ್ಯವಿಶೇಷವೆಂದೇ ಹೇಳಬೇಕು. ನಾವು ಜೀವನಪೂರ್ತಿ ಈ ಹೋರಾಟಗಾರರಿಗೆ ಚಿರಋಣಿಯಾಗಿರಬೇಕು.

(ಮುಗಿಯಿತು.)

ಜೀವನದಿಗಳ ಸಾವಿನ ಕಥನ – 23


– ಡಾ.ಎನ್.ಜಗದೀಶ್ ಕೊಪ್ಪ


ಬೃಹತ್ ಅಣೆಕಟ್ಟುಗಳ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಅಮೆರಿಕಾದ ನೆಲದಲ್ಲೆ ಅಣೆಕಟ್ಟು ಎಂಬ ಪರಿಕಲ್ಪನೆ  ಮನುಷ್ಯನ ಅವಿವೇಕಿತನದ ಪರಮಾವಧಿ ಎಂಬ ವಿವೇಕ ಮತ್ತು ಜ್ಞಾನ ಮೂಡಿದ್ದು ಅಚ್ಚರಿಯ ಸಂಗತಿಗಳಲ್ಲಿ ಒಂದು.

1980 ರ ದಶಕದ ವೇಳೆಗೆ ವಿಶ್ವ ವ್ಯಾಪಿಯಾಗಿ ವಿಸ್ತರಿಸಿದ ಅಣೆಕಟ್ಟುಗಳ ವಿರುದ್ಧದ ಆಂದೋಲನ 20 ನೇ ಶತಮಾನದ ಅಂತ್ಯದ ವೇಳೆಗೆ ಅಣೆಕಟ್ಟುಗಳನ್ನು ಪ್ರತಿಪಾದಿಸುತ್ತಾ ಬಂದಿದ್ದ ಬಹುರಾಷ್ಟ್ರೀಯ ಕಂಪನಿಗಳು, ವಿಶ್ವಬ್ಯಾಂಕ್ ಹಾಗೂ ಅವುಗಳ ಪ್ರತಿನಿಧಿಗಳನ್ನು ಮರುಚಿಂತನೆಗೆ ಹಚ್ಚಿದ್ದು  ಜಗತ್ತಿನ ಪರಿಸರವಾದಿಗಳ ಮಹತ್ವದ ವಿಜಯ ಎಂದು ವ್ಯಾಖ್ಯಾನಿಸಿದರೆ ಅತಿಶಯವಾಗಲಾರದು.

ಮನುಕುಲದ ಬಗ್ಗೆ, ಈ ನೆಲದ ಜೀವಜಾಲದ ಬಗ್ಗೆ ಅಪಾರ ಆಸಕ್ತಿ ಮತ್ತು ಕಾಳಜಿ ಹೊಂದಿದ್ದ ತಜ್ಞರು, ಚಿಂತಕರು ಇಂತಹ ಮಹನೀಯರು ತೋರಿದ ಹಾದಿಯಲ್ಲಿ ಎಲ್ಲಾ ರಾಷ್ಟ್ರಗಳಲ್ಲಿ ಜನಸಾಮಾನ್ಯರಿಗೆ ನದಿಗಳ ಕುರಿತು, ಪರಿಸರ ಕುರಿತು ಜಾಗೃತಿ ಉಂಟಾಯಿತು. ಇದರ ಪರಿಣಾಮ ಬೃಹತ್ ಅಣೆಕಟ್ಟುಗಳ ಭ್ರಮೆ ಎಲ್ಲೆಡೆ ಕಳಚಿ ಬಿದ್ದಿದೆ. ಆಧುನಿಕ ಜಗತ್ತಿಗೆ ಬೃಹತ್ ಯೋಜನೆಗಳು ಮಾದರಿಯಲ್ಲ ಎಂಬ ಸತ್ಯ ಅರಿವಾಗತೊಡಗಿದೆ. ಅಣೆಕಟ್ಟುಗಳ ನಿರ್ಮಾಣಕ್ಕೆ  ಆರ್ಥಿಕ ಸಹಾಯ ನೀಡುತ್ತಾ ಅವುಗಳ ಪಾಲಿಗೆ ತಾಯಿಯಂತೆ ಇದ್ದ ವಿಶ್ವಬ್ಯಾಂಕ್ ಕೂಡ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. ಇದರಿಂದಾಗಿ ನಮ್ಮ ಜೀವನದಿಗಳಿಗೆ ಮರುಜೀವ ದೊರೆತಂತಾಗಿದೆ. ಇದಕ್ಕೆ ಕಾರಣವಾದ ಪ್ರತಿಭಟನೆಯ ಇತಿಹಾಸ ಇಲ್ಲಿದೆ.

ಜಗತ್ತಿನೆಲ್ಲೆಡೆ ಹರಿಯುವ ಜೀವನದಿಗಳಿಗೆ ಅಡ್ಡಲಾಗಿ ನಿರ್ಮಾಣ ಮಾಡುವ ಅಣೆಕಟ್ಟುಗಳ ಬಗ್ಗೆ ಪ್ರತಿಭಟನೆಯ ಕಿಡಿ ಹೊತ್ತಿಕೊಡಿದ್ದು, 1940ರ ದಶಕದ ಅಮೇರಿಕಾದ ಕ್ಯಾಲಿಪೋರ್ನಿಯಾದ ನೆಲದಲ್ಲಿ. ಅಲ್ಲಿನ ಕಾಡು ಮೇಡು ಹಾಗೂ ನದಿಗಳ ಕುರಿತಂತೆ ಅಪಾರ ಆಸಕ್ತಿ ತಾಳಿದ್ದ ಸಮಾನ ಮನಸ್ಕರ ಗುಂಪೊಂದು ಸಿಯೆರಾ ಕ್ಲಬ್ ಹೆಸರಿನ ಸಂಸ್ಥೆಯೊಂದನ್ನು ಜಾನ್ ಮ್ಯುಯರ್ ಎಂಬಾತನ ನೇತೃತ್ವದಲ್ಲಿ (1892) ಆರಂಭಿಸಿತ್ತು.

ಈತನ ನಿಧನದ ನಂತರ ಕ್ಲಬ್‌ನ ಚುಕ್ಕಾಣಿ ಹಿಡಿದ ಡೆವಿಡ್ ಬ್ರೌವರ್ ಅಮೇರಿಕಾ ಸರ್ಕಾರ  ಕೊಲರಾಡೊ ನದಿಗೆ ಅಣೆಕಟ್ಟು ನಿರ್ಮಿಸಲು ಮುಂದಾದಾಗ, ಅಣೆಕಟ್ಟು ನಿರ್ಮಾಣದಿಂದ ನಿಸರ್ಗಕ್ಕೆ ಆಗುವ ಪರಿಣಾಮಗಳನ್ನು ಜನತೆಗೆ ವಿವರಿಸತೊಡಗಿದ. ಮುಂದೆ ಇದೊಂದು ಚಳುವಳಿಯಾಗಿ ಪರಿವರ್ತನೆಗೊಂಡಿತು. ಹಾಗಾಗಿ ಸಿಯೆರಾ ಕ್ಲಬ್‌ನ ಈ ಇಬ್ಬರು ಮಹನೀಯರನ್ನು ಅಮೇರಿಕಾ ಜನತೆ 20ನೇ ಶತಮಾನದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಎಂದು ಗುರುತಿಸಿ ಗೌರವಿಸಿದೆ.

ಅಮೇರಿಕಾ ಸರ್ಕಾರ ಕೊಲರಾಡೊ ನದಿಗೆ ಅಣೆಕಟ್ಟು ಕಟ್ಟಲು ರೂಪು ರೇಷೆಗಳನ್ನು ಸಿದ್ಧಪಡಿಸುತಿದ್ದಂತೆ ಡೆವಿಡ್ ಬ್ರೌವರ್ ತನ್ನ ಕ್ಲಬ್ ಸದಸ್ಯರು ಹಾಗು ಜನಸಾಮಾನ್ಯರನ್ನು ನದಿಯ ನೀರಿನಲ್ಲಿ ದೋಣಿಗಳ ಮೂಲಕ ಕೊಂಡೊಯ್ದು ಅಣೆಕಟ್ಟು ನಿರ್ಮಾಣದಿಂದ ಆಗುವ ಅನಾಹುತ ಮತ್ತು ಹಿನ್ನೀರಿನಿಂದ ಮುಳುಗಡೆಯಾಗುವ ರಾಷ್ಟ್ರೀಯ ಸ್ಮಾರಕ ಇವುಗಳ ಬಗ್ಗೆ ವಿವರಿಸಿ ಜನರಲ್ಲಿ ಜಾಗೃತಿ ಮೂಡಿಸಿದ. ಇಂತಹ ಒಂದು ಪ್ರಕ್ರಿಯೆಯನ್ನು ಊಹಿಸದ ಅಲ್ಲಿನ ರಾಜಕೀಯ ನಾಯಕರು ಮಾತ್ರವಲ್ಲದೆ, ಪತ್ರಿಕೆಗಳೂ ಈ ಅಚ್ಚರಿಯ ಬೆಳವಣಿಗೆಯಿಂದ ಬೆಚ್ಚಿಬಿದ್ದವು.

ಅಣೆಕಟ್ಟು ನಿರ್ಮಾಣ ಸರ್ಕಾರ  ಕುರಿತಂತೆ ಅಮೇರಿಕಾ ಫೆಡರಲ್ ಸರ್ಕಾರ  ಮುಚ್ಚಿಟ್ಟಿದ್ದ ಅನೇಕ ಸಂಗತಿಗಳನ್ನು ಬ್ರೌವರ್ ಕಿರು ಹೊತ್ತಿಗೆಯಲ್ಲಿ ಪ್ರಕಟಿಸಿ, ಅಲ್ಲಿ ಜನತೆ ಮತ್ತು ಸಂಸತ್ ಸದಸ್ಯರಿಗೆ ಹಂಚಿದ. ಇದರ ಪರಿಣಾಮ 1956ರಲ್ಲಿ ಅಣೆಕಟ್ಟು  ನಿರ್ಮಾಣದ ವಿರುದ್ಧ ಸದಸ್ಯರು ಮತ ಚಲಾಯಿಸಿ ಅಣೆಕಟ್ಟನ್ನು ತಡೆಹಿಡಿದರು. ಇದರಿಂದ ವಿಚಿಲಿತವಾಗದ ಅಮೇರಿಕಾ ಸರ್ಕಾರ ಅದೇ ನದಿಗೆ ಬೇರೆ ಬೇರೆ ಸ್ಥಳಗಳಲ್ಲಿ ಪರಿಸರಕ್ಕೆ ಮಾರಕವಾಗದಂತೆ ಅನೆಕಟ್ಟುಗಳ ನಿರ್ಮಾಣಕ್ಕೆ ಮುಂದಾಯಿತು. ವಿದ್ಯುತ್ ಉತ್ಪಾದನೆ ಹಾಗೂ ಅರಿಜೋನ ಪ್ರಾಂತ್ಯದ ನಗರಗಳಿಗೆ ಕುಡಿಯುವ ನೀರಿನ ಯೋಜನೆಗಾಗಿ ಗ್ಲೇನ್ ಕ್ಯಾನಲ್ ಮತ್ತು ಪೋವೆಲ್ ಜಲಾಶಯಗಳ ಪ್ರಸ್ತಾವನೆಯನ್ನು ಜನತೆಯ ಮುಂದಿಟ್ಟಿತು. ಸರ್ಕಾರದ ಪ್ರಸ್ತಾವನೆಗೆ ಮರುಳಾಗದ ಪರಿಸರವಾದಿಗಳು, ಇವುಗಳ ನಿರ್ಮಾಣಕ್ಕೆ ಹೂಡುವ ಬಂಡವಾಳದ ಅರ್ಧ ವೆಚ್ಚದಲ್ಲಿ ಅಣುವಿದ್ಯುತ್ ಹಾಗೂ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದಿಸಬಹುದೆಂದು ಕರಪತ್ರಗಳ ಚಳುವಳಿಯನ್ನು ಪ್ರಾರಂಭಿಸಿದರು.

ಅಮೇರಿಕಾ ಪರಿಸರವಾದಿಗಳ ಅರ್ಥಪೂರ್ಣ ಚಳುವಳಿಯಿಂದಾಗಿ 1970ರ ದಶಕದ ವೇಳೆಗೆ ದೇಶಾದ್ಯಂತ ಅಣೆಕಟ್ಟುಗಳ ವಿರುದ್ಧದ ಪ್ರತಿಭಟನೆ ವ್ಯಾಪಿಸತೊಡಗಿತು. ಇದೇ ಸಮಯಕ್ಕೆ ಅಲ್ಲಿನ ಪ್ರಸಿದ್ದ ಚಿಂತಕ ಡಾ. ಬ್ರೆಂಟ್ಬ್ಲಾ ಕ್ವೆಲ್ಡರ್ ಎಂಬಾತನ ನೇತೃತ್ವದಲ್ಲಿ “ಅಮೇರಿಕಾ ನದಿಗಳ ರಕ್ಷಣಾ ಪರಿಷತ್” ಎಂಬ ಮತ್ತೊಂದು ಪರಿಸರ ಸಂಘಟನೆ ಆರಂಭಗೊಂಡಿತು. ಈತನ ನೇತೃತ್ವದಲ್ಲಿ ಸತತ 13 ವರ್ಷಗಳ ಕಾಲ ಅಂದರೆ, 1970ರಿಂದ 1983ರ ವರೆಗೆ ನಡೆದ ಹೋರಾಟದಲ್ಲಿ ಅಮೇರಿಕಾದ 140 ಬೃಹತ್ ನೀರಾವರಿ ಯೋಜನೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣ ಸ್ಥಗಿತಗೊಂಡವು.

1977ರಲ್ಲಿ ಅಮೇರಿಕಾದ ಅಧ್ಯಕ್ಷನಾಗಿ  ಶೆಂಗಾ ಬೆಳೆಯುತಿದ್ದ ಸಾಮಾನ್ಯ ರೈತನ ಮಗ ಜಿಮ್ಮಿಕಾರ್ಟರ್ ಆಯ್ಕೆಯಾದಾಗ ಬ್ಲಾಕ್ವೆಲ್ಡರ್ ಮತ್ತು ಆತನ ಸಂಗಡಿಗರು ಜಿಮ್ಮಿ ಕಾರ್ಟರ್‌ನನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು. ಇವರ ನಿರೀಕ್ಷೆಗಳನ್ನು ಜಿಮ್ಮಿ ಕಾರ್ಟರ್ ಹುಸಿಗೊಳಿಸಲಿಲ್ಲ. ಅಧಿಕಾರ ಸ್ವೀಕರಿಸಿದ ತಕ್ಷಣ ಅಮೇರಿಕಾದಲ್ಲಿ ವಿವಾದಕ್ಕೆ ಒಳಾಗಾಗಿದ್ದ ಎಲ್ಲಾ 19 ಅಣೆಕಟ್ಟು ಯೋಜನೆಗಳನ್ನು ರದ್ದು ಪಡಿಸಿದ. ಇದಕ್ಕೆ ಜಿಮ್ಮಿ ಕಾರ್ಟರ್ ಕೊಟ್ಟ ಉತ್ತರ ಮಾರ್ಮಿಕವಾಗಿತ್ತು.  ನೀರಾವರಿ ಅಥವಾ ವಿದ್ಯುತ್ ಯೋಜನೆಗಳಿಂದ ಸಿಗುವ ಪ್ರತಿಫಲಗಳಿಗಿಂತ ನದಿಯ ಇಕ್ಕೆಲಗಳಲ್ಲಿರುವ ಜೀವಜಾಲದ ವ್ಯವಸ್ಥೆಗೆ ಬೆಲೆ ಕಟ್ಟಲಾಗದು ಎಂದು ಜಿಮ್ಮಿ ಕಾರ್ಟರ್ ಅಭಿಪ್ರಾಯ ಪಟ್ಟಿದ್ದ.

ಆದರೆ, 1981ರಲ್ಲಿ ಅಧಿಕಾರಕ್ಕೆ ಬಂದ ಪ್ಲೇ ಬಾಯ್ ಖ್ಯಾತಿಯ ರೋನಾಲ್ಡ್ ರೇಗನ್ ಮತ್ತೇ ಅಣೆಕಟ್ಟು ಹಾಗೂ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ. ಇದಕ್ಕಾಗಿ ಫಡರಲ್ ಸರ್ಕಾರದಿಂದ ಎರಡು ಶತಕೋಟಿ ಡಾಲರ್ ಹಣವನ್ನು ಸಹ ಮೀಸಲಾಗಿಟ್ಟ. ರೇಗನ್ ಇಲ್ಲೊಂದು ತನ್ನ ಚಾಣಾಕ್ಷತನವನ್ನು ತೋರಿದ್ದ. ಅದೇನೆಂದರೆ, ಅಣೆಕಟ್ಟುಗಳ  ನಿರ್ಮಾಣಕ್ಕೆ ಫೆಡರಲ್ ಸರ್ಕಾರದ ಜೊತೆಗೆ ಆಯಾ ರಾಜ್ಯಗಳು ಸಹ ಬಂಡವಾಳ ಹೂಡುವಂತೆ ಮಾಡಿ ಒಂದಿಷ್ಟು ಜವಾಬ್ದಾರಿ ಹಾಗೂ ತೊಂದರೆಗಳನ್ನು ವರ್ಗಾವಣೆ  ಮಾಡಿದ್ದ. ಇದರಿಂದಾಗಿ ಅಮೇರಿಕಾದಲ್ಲಿ ಅಣೆಕಟ್ಟುಗಳ ಬೇಡಿಕೆ ಕುಂಠಿತಗೊಂಡಿತು.

1991ರಲ್ಲಿ ಅಮೇರಿಕಾ ಅಧ್ಯಕ್ಷನಾಗಿ ಆಯ್ಕೆಯಾದ ಬಿಲ್ ಕ್ಲಿಂಟನ್ ಮಾಡಿದ ಮಹತ್ವದ ಕಾರ್ಯವೆಣದರೆ, ಅಣೆಕಟ್ಟುಗಳ ನಿರ್ಮಾಣಕ್ಕೆ ಮೀಸಲಿಡುತಿದ್ದ ಹಣದ ಪ್ರಮಾಣವನ್ನು ಕಡಿತಗೊಳಿಸಿ, ಪರಿಸರದ ರಕ್ಷಣೆಗೆ ನಿಧಿಯೊಂದನ್ನು ಸ್ಥಾಪಿಸಿದ. ಅಮೇರಿಕಾದಲ್ಲಿ ಹೀಗೆ ತಮ್ಮ ನಿರಂತರ ಹೋರಾಟದ ಮೂಲಕ ಜಾಗೃತಿಯುನ್ನುಂಟು ಮಾಡಿದ ಪರಿಸರವಾದಿಗಳು ಈಗ ಕಿರು ಅಣೆಕಟ್ಟುಗಳು ಹಾಗೂ ಅಂತರ್ಜಲ ಹೆಚ್ಚಿಸುವ ನೀರಿನ ಹೊಂಡಗಳ ಕುರಿತಂತೆ ಅಭಿಯಾನದ ಮೂಲಕ ಜನತೆಯನ್ನು ಎಚ್ಚರಿಸುತಿದ್ದಾರೆ. ಅಮೆರಿಕಾದಲ್ಲಿ ಹುಟ್ಟಿಕೊಂಡ ಅಣಕಟ್ಟುಗಳ ವಿರುದ್ದ ಚಳುವಳಿ ಅಲ್ಪಾವಧಿಯಲ್ಲೇ ಜಗತ್ತಿನಾದ್ಯಂತ ವಿಸ್ತರಿಸಿತು. ಪಶ್ಚಿಮದ ಆಸ್ಟ್ರೇಲಿಯ, ಹಂಗೇರಿ,  ಬಲ್ಗೇರಿಯ, ಅಂದಿನ ಚಕೊಸ್ಲೊವೇಕಿಯ ಗಣರಾಜ್ಯ ಮುಂತಾದ ರಾಷ್ಟ್ರಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಎಲ್ಲಾ ರಾಷ್ಟ್ರಗಳು ಪರಿಸರವಾದಿಗಳಿಂದ ತೀವ್ರವಾದ ಪ್ರತಿಭಟನೆ ಎದುರಿಸಬೇಕಾಯಿತು.

ಆಸ್ಟ್ರೇಲಿಯಾದ ತಾಸ್ಮೇನಿಯಾ ಪ್ರಾಂತ್ಯದಲ್ಲಿ ಪೆಡ್ಡರ್ ಎಂಬ ನಿಸರ್ಗದತ್ತ ಹಾಗೂ ಶುದ್ಧತಿಳಿನೀರಿನ, ಏಳು ಕಿಲೋಮೀಟರ್ ವ್ಯಾಪ್ತಿಯ ಸರೋವರವಿದೆ. ಇದರ ಪಕ್ಕದಲ್ಲೇ ಹರಿಯುವ ನದಿಯೊಂದಕ್ಕೆ ಅಣೆಕಟ್ಟು ನಿರ್ಮಾಣ ಮಾಡಿ, ಜಲಾಶಯದ ಜೊತೆ ಸರೋವರವನ್ನು ವಿಲೀನಗೊಳಿಸುವ ಯೋಜನೆಯನ್ನು ತಾಸ್ಮೇನಿಯಾ ಸರ್ಕಾರ ರೂಪಿಸಿತು. ಜೊತೆಗೆ ಗಾರ್ಡಾನ್ ನದಿಗೆ ಪ್ರಾಂಕ್ಲಿನ್ ಅಣೆಕಟ್ಟು ನಿರ್ಮಿಸಿ ವಿದ್ಯುತ್ ಉತ್ಪಾದನೆಗೆ ಮುಂದಾಯಿತು. ಈ ಎರಡು ಯೋಜನೆಗಳಿಗೆ ಆಸ್ಷ್ರೇಲಿಯಾ ಸರ್ಕಾರ ಅನುಮೋದನೆ ನೀಡಿ ಆರ್ಥಿಕ ನೆರವು ಸಹ ನೀಡಿತ್ತು. ಪ್ರಾಂಕ್ಲಿನ್ ಜಲಾಶಯದ ಹಿನ್ನೀರಿನಲ್ಲಿ 20 ಸಾವಿರ ವರ್ಷಗಳಷ್ಟು ಹಳೆಯದಾದ ಗುಹೆಗಳು, ಅಪರೂಪದ ಅಭಯಾರಣ್ಯ ಮುಳುಗಿಹೋಗುವುದನ್ನು ಅಲ್ಲಿ ಜನತೆ ಪ್ರತಿಭಟಿಸಿ ಉಳಿಸಿಕೊಂಡರು. ವೃತ್ತಿಯಲ್ಲಿ ವೈದ್ಯನಾಗಿದ್ದ ಬಾಬ್ ಬ್ರೌನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 20 ಸಾವಿರಕ್ಕೂ ಅಧಿಕ ಪರಿಸರವಾದಿಗಳು ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ ಪೆಡ್ಡರ್ ಸರೋವನ್ನು ಸಹ ಯಥಾಸ್ಥಿತಿಯಲ್ಲಿ ಉಳಿಸಿಕೊಂಡರು. ಇವರ ಈ ಹೋರಾಟ 32 ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಣೆಕಟ್ಟುಗಳ ವಿರುದ್ದದ ಪ್ರತಿಭಟನೆಗೆ ಸ್ಪೂರ್ತಿಯಾಯಿತು.

ಹಂಗೇರಿಯಲ್ಲಿ ಆಡಳಿತದಲ್ಲಿದ್ದ ಕಮ್ಯೂನಿಷ್ಟ್ ಸರ್ಕಾರದ ವಿರುದ್ದ ಅಲ್ಲಿ ಜನತೆ ಅಣೆಕಟ್ಟುಗಳ ವಿಷಯದಲ್ಲಿ ದನಿಯೆತ್ತಿದ್ದು ಇಂದಿಗೂ ಅದೊಂದು ಕ್ರಾಂತಿಯ ಮೈಲಿಗಲ್ಲು. ಹಂಗೇರಿ ಹಾಗೂ ಇಂದಿನ ಸ್ಲೋವೇಕಿಯಾ ನಡುವೆ ಹರಿಯುತ್ತಿರುವ ನದಿಗೆ ಹಂಗೇರಿ ಸರ್ಕಾರ ನ್ಯಾಗಿಮಾರೊ ಎಂಬ ಸ್ಥಳದಲ್ಲಿ ಹಾಗೂ ಸ್ಲೋವೇಕಿಯಾ ಸರ್ಕಾರ ಗ್ಯಾಬಿಕ್ಕೋವ ಎಂಬ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಿದವು. ಈ ಯೋಜನೆಗೆ ವಿದ್ಯುತ್ ಅಭಾವ ಎದುರಿಸುತಿದ್ದ ಆಸ್ಟ್ರಿಯಾ ದೇಶ ಹಣ ವಿನಿಯೋಗಿಸಲು ಒಪ್ಪಿಗೆ ನೀಡಿತ್ತು. ಹಂಗೇರಿಯ 15 ಸಾವಿರ ಮತ್ತು ಸ್ಲೋವೇಕಿಯಾದ 10 ಸಾವಿರ ಜನರ ಪ್ರತಿಭಟನೆಗೆ ಮಣಿದ ಎರಡು ಸರ್ಕಾರಗಳು ಅಂತಿಮವಾಗಿ ಯೋಜನೆಯನ್ನು ಕೈಬಿಟ್ಟವು. 1980ರಲ್ಲಿ ಪ್ರಾರಂಭವಾದ ಈ ಹೋರಾಟ 1989ರಲ್ಲಿ ಮುಕ್ತಾಯವಾಯಿತು.

ಬಲ್ಗೇರಿಯಾ ರಾಷ್ಟ್ರದಲ್ಲಿ ಕೂಡ ಅಂದಿನ ಸೋವಿಯತ್ ರಷ್ಯಾ ನೆರವಿನಿಂದ ಅಲ್ಲಿ ಸರ್ಕಾರ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾಗಿತ್ತು. ಇವುಗಳಲ್ಲಿ ಎರಡು ಅಣೆಕಟ್ಟುಗಳು ಮುಕ್ತಾಯದ ಹಂತ ತಲುಪಿದ್ದವು. ನದಿಗಳ ರಕ್ಷಣೆಗಾಗಿ ಅಲ್ಲಿನ 30 ಸಾವಿರ ಜನತೆ ಬೀದಿಗಿಳಿದಾಗ, ಸೋವಿಯತ್ ಒಕ್ಕೂಟಕ್ಕೆ ಸೇರಿದ್ದ  ಜಾರ್ಜಿಯಾದ ಗ್ರೀನ್ ಎಂಬ ಪರಿಸರ ಸಂಘಟನೆಯ ಬೆಂಬಲದಿಂದ ಬೃಹತ್ ಪ್ರತಿಭಟನೆ ನಡೆಸಿ ಕಾಮಗಾರಿಗಳನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಈ ಹೋರಾಟಕ್ಕೆ ಜಾರ್ಜಿಯಾದ 8 ಸಾವಿರ ಪರಿಸರವಾದಿಗಳು ಕೈಜೋಡಿಸಿದ್ದರು.

(ಮುಂದುವರೆಯುವುದು)

ಜೀವನದಿಗಳ ಸಾವಿನ ಕಥನ – 22


– ಡಾ.ಎನ್.ಜಗದೀಶ ಕೊಪ್ಪ


ಜಗತ್ತಿನ ಬೃಹತ್ ಅಣೆಕಟ್ಟುಗಳಿಗೆ ಪರ್ಯಾಯ ವ್ಯವಸ್ಥೆ ಕೂಡ ಇದೆ ಎಂಬುದನ್ನ ತೋರಿಸಿಕೊಟ್ಟವರು ನಮ್ಮ ಮಹಾರಾಷ್ಟ್ರದ ಯರೇಲ ನದಿಯ ತೀರದ ಎರಡು ಹಳ್ಳಿಗಳ ರೈತರು. ಈ ಕುರಿತು ದೆಹಲಿಯ ಸೇಜ್ ಪ್ರಕಾಶನ ಪ್ರಕಟಿಸಿರುವ “Big Dams, Displaced People: Rivers of Sorrow, Rivers of Change” ಎಂಬ ಕೃತಿ ನಮ್ಮೆಲ್ಲರ ಕಣ್ಣು ತೆರಸಬಲ್ಲದು. ಈ ನದಿಯ ಪ್ರಾಂತ್ಯದ ರೈತರು ನೀರಿನ ಹಂಚಿಕೆ ಕುರಿತಂತೆ ಸಹಕಾರಿ ತತ್ವದ ಮೇಲೆ ತಾವೇ ಒಂದು ಸಮಿತಿಯನ್ನು ರಚಿಸಿಕೊಂಡು ನೀರು ಹಂಚಿಕೆ ಕುರಿತು ಈ ರೀತಿಯ ಪ್ರತಿಜ್ಞೆ ಮಾಡಿದ್ದಾರೆ: “ಈ ಭೂಮಿಯ ಮೇಲಿರುವ ಎಲ್ಲರಿಗೂ ಬಡವ-ಬಲ್ಲಿದ ಎಂಬ ತಾರತಮ್ಯವಿಲ್ಲದೆ ಪ್ರಕೃತಿಯ ಕೊಡುಗೆಯಾದ ನೀರಿನ ಮೇಲೆ ಹಕ್ಕಿದೆ. ನಮ್ಮೆಲ್ಲರ ಶ್ರಮದಾನದಿಂದ ಶೇಖರಿಸಲ್ಪಡುವ ಈ ನದಿ ನೀರಿನ ಮೇಲೆ ಯಾರಿಗೂ ವಿಶೇಷವಾದ ಅಧಿಕಾರವಿರುವುದಿಲ್ಲ. ನಾವು ಕೈಗೊಂಡಿರುವ ಈ ಪ್ರತಿಜ್ಙೆಯಂತೆ ಕಾಯಾ ವಾಚಾ ಮನಸಾ ನಡೆದುಕೊಳ್ಳುತ್ತೇವೆ.”

ಆಧುನಿಕ ಅಣೆಕಟ್ಟುಗಳಿಗೆ ಬದಲಾಗಿ ಪಾರಂಪರಿಕ ತಂತ್ರಜ್ಞಾನ ಬಳಸಿ ನದಿಯ ಸಹಜ ಹರಿಯುವಿಕೆಗೆ ಅಡ್ಡಿಯಾಗದಂತೆ ನಿರ್ಮಿಸಿದ ಒಡ್ಡುಗಳ ಮೂಲಕ ಹೊಸ ಭಾಷ್ಯವನ್ನು ಬರೆದ ಈ ರೈತರ ಪ್ರತಿಜ್ಞೆ ಜಗತ್ತಿನ ಎಲ್ಲಾ ನದಿ ನೀರಿನ ಬಳಕೆದಾರರಿಗೆ ದಾರಿ ದೀಪವಾಗಬಲ್ಲದು. ಜೊತೆಗೆ ಬರಗಾಲಕ್ಕೂ ಮದ್ದಾಗಬಲ್ಲದು. ನದಿ ಪಾತ್ರದಲ್ಲಿ ಬದುಕುವ ಆಯಾ ಸಮುದಾಯ ತಮ್ಮ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನದಿ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನಿರ್ಮಿಸುತ್ತಿರುವ ಕಿರು ಅಣೆಕಟ್ಟುಗಳು ಸರ್ಕಾರಗಳಿಗೆ ಹೊರೆಯಾಗಿರುವುದಿಲ್ಲ. ಎಲ್ಲೆಡೆ ನಿರ್ಮಾಣವಾಗುತ್ತಿರುವ ಒಡ್ಡುಗಳು, ಕಿರು ಅಣೆಕಟ್ಟುಗಳು ಬಹುತೇಕ ರೈತರೇ ಶ್ರಮದಾನದ ಮೂಲಕ  ನಿರ್ಮಿಸುವುದರಿಂದ ಅಲ್ಪ ವೆಚ್ಚದಿಂದ ಕೂಡಿರುತ್ತವೆ. ಕಚ್ಛಾ ವಸ್ತುಗಳಾದ ಸಿಮೆಂಟ್ ಕಬ್ಬಿಣ ಇಂತಹುಗಳಿಗೆ ಹಣ ವೆಚ್ಚವಾಗುತ್ತದೆ. ಕೆಲವೆಡೆ ತಜ್ಞರು ಇವರಿಗೆ ಉಚಿತ ತಾಂತ್ರಿಕ ಸಲಹೆ ನೀಡಿರುವ ಉದಾಹರಣೆಗಳುಂಟು. ಕಿರು ಅಣೆಕಟ್ಟಿನ ವೆಚ್ಚಕ್ಕಾಗಿ ರೈತರು ಬ್ಯಾಂಕುಗಳಿಂದ ಸಾಲ ಪಡೆದು ವರ್ಷಕ್ಕೊಮ್ಮೆ ಮರು ಪಾವತಿ ಮಾಡುತ್ತಿದ್ದಾರೆ. ಈ ರೀತಿಯ ರೈತರ ಸ್ವಾವಲಂಬನೆಯ ನೀರಾವರಿ ಯಶಸ್ಸಿನ ಕಥನ ಮಹರಾಷ್ಟ್ರ, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಗುರಿ ಮುಟ್ಟಿದೆ.

1970ರ ದಶಕದಲ್ಲಿ ಯರೇಲ ನದಿ ತೀರದಲ್ಲಿ ನಡೆದ ಅಡೆತಡೆಯಿಲ್ಲದ ಅಕ್ರಮ ಮರಳು ಸಾಗಾಣಿಕೆ, ಶ್ರೀಮಂತ ಜಮೀನುದಾರರ ಕಬ್ಬಿನ ಬೆಳೆಗೆ ಬಳಕೆಯಾದ ಯಥೇಚ್ಛ ನದಿ ನೀರು, ಇವುಗಳ ಪರಿಣಾಮ ನದಿ ಪಾತ್ರದ ಹಳ್ಳಿಗಳಲ್ಲಿ ನೀರಿನ ಅಂತರ್ಜಲ ಮಟ್ಟ ಕುಸಿದು ತೆರೆದ ಬಾವಿ, ಕೊಳವೆ ಬಾವಿ ಬತ್ತತೊಡಗಿದವು. ಸರಕಾರ ನಿರ್ಮಿಸಿದ ಜಲಾಶಯವಾಗಲಿ, ನೀರಾವರಿ ಯೋಜನೆಗಳಾಗಲಿ ರೈತರ ಬವಣೆ ನೀಗುವಲ್ಲಿ ವಿಫಲವಾದವು,

ಇವೆಲ್ಲವನ್ನು ಗಮನಿಸಿ ರೈತರು  ಸರ್ಕಾರದ ಆಸರೆಯಿಲ್ಲದೆ 1986ರಲ್ಲಿ ತಾವೇ ನದಿಗೆ ಚಿಕ್ಕ ಅಣೆಕಟ್ಟು ನಿರ್ಮಿಸಿದರು. ರೈತರು, ವಿರ್ದ್ಯಾಥಿಗಳ ಶ್ರಮಾದಾನದಿಂದ ಇದಕ್ಕೆ ಕೇವಲ ಮೂರು ಲಕ್ಷ ರೂ. ವೆಚ್ಚವಾಯಿತು. 13 ಅಡಿ ಎತ್ತರ ಮತ್ತು 360 ಅಡಿ ಉದ್ದದ ಈ ಅಣೆಕಟ್ಟನ್ನು ಮಹರಾಷ್ಟ್ರ  ಸರ್ಕಾರ ಅಕ್ರಮ ನಿರ್ಮಾಣ ಎಂದು ಷೋಷಿಸಿತು. ಈ ಸಂದರ್ಭದಲ್ಲಿ ರೈತರ ನೆರವಿಗೆ ಬಂದ ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆ ರೈತರ ಬವಣೆ ಮತ್ತು ಸಕಾರದ ನಿರ್ಲಕ್ಷ್ಯ ಧೋರಣೆ ಕುರಿತಂತೆ ನಿರಂತರವಾಗಿ ಲೇಖನಗಳ ಸರಣಿಯನ್ನೇ ಬರೆದು ಪ್ರಕಟಿಸಿತು. ಸರ್ಕಾರದ ಇಂತಹ ಅವಿವೇಕದ ನಿರ್ಧಾರದ ಹಿಂದೆ ಮರಳು ಮಾಫಿಯಾ ಮತ್ತು  ಶ್ರೀಮಂತ ಭೂಮಾಲಿಕರ ಕೈವಾಡವಿದೆಯೆಂದು ಪತ್ರಿಕೆ ಆರೋಪಿಸಿತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ  ಅಂತಿಮವಾಗಿ 1989ರಲ್ಲಿ ಅಣೆಕಟ್ಟನ್ನು ಅಧಿಕೃತ ಎಂದು ಘೋಷಿಸಿತು.

ಆರು ಲಕ್ಷ ಚದುರ ಮೀಟರ್ ನೀರು ಶೇಖರವಾಗುವ ಈ ಜಲಾಶಯದ ನೀರಿನಲ್ಲಿ ಅಲ್ಲಿನ ರೈತರು ತಮ್ಮ ಹಳ್ಳಿಗಳಲ್ಲಿ ಜಮೀನಿಲ್ಲದ ರೈತರಿಗೂ ನೀರಿನ ಹಕ್ಕನ್ನು ಕೊಟ್ಟರು. ಈ ರೈತರು ತಮ್ಮ ಪಾಲಿನ ನೀರನ್ನು ಇತರೆ ರೈತರಿಗೆ ಮಾರಿ ಆದಾಯ ಗಳಿಸಿದರು.

ಸುಮಾರು 380 ಹೆಕ್ಟೆರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಂಡ ರೈತರು ಅಧಿಕ ನೀರು ಬೇಡುವ ವಾಣಿಜ್ಯ ಬೆಳೆಗಳಿಗೆ ಕೈ ಹಾಕದೆ ಕಡಿಮೆ ನೀರಿನಲ್ಲಿ ಬೆಳೆಯ ಬಹುದಾದ ಗೋಧಿ, ಜೋಳ, ಕಿರುಧಾನ್ಯಗಳನ್ನು ಬೆಳೆಯಲು ಪ್ರಾರಂಭಿಸಿದರು. ನದಿಯ ಇಕ್ಕೆಲಗಳಲ್ಲಿ ಹಾಗೂ ಅಣೆಕಟ್ಟಿನ ದಿಬ್ಬದ ಮೇಲೆ ಬೆಳೆಸಿದ ಗಿಡ ಮರಗಳಿಂದಾಗಿ ಅಲ್ಲಿನ ಜೈವಿಕ ಪರಿಸರ ಮತ್ತೇ ಸಮತೋಲನಕ್ಕೆ ಬಂದು, ಬತ್ತಿ ಹೋಗಿದ್ದ ಬಾವಿಗಳಿಗೆ ಮರು ಜೀವ ಬಂದಿತು ಈ ಕುರಿತು ವಿವರವಾದ ಅಧ್ಯಯನ ನಡೆಸಿದ ಗಂಗೂಲಿ ಕುಗ್ರಾಲ್ ಮತ್ತು ಮುಚಿಂದ್ರ ಸಾಕೇಟ್ ಎಂಬ ಸಮಾಜ ವಿಜ್ಞಾನಿಗಳು. ಈ ಹಳ್ಳಿಗರಿಂದ ನಿರ್ಮಿತವಾಗಿರುವ ಈ ಪುಟ್ಟ ಜಲಾಶಯದ ನೀರು ಯಾವುದೇ ಧರ್ಮ, ಜಾತಿ, ಲಿಂಗ ಭೇದವಿಲ್ಲದೆ ಎಲ್ಲರಿಗೂ ನೀರಿನ ಮೇಲೆ ಸಮಾನ ಹಕ್ಕನ್ನು ಕಲ್ಪಿಸಿಕೊಟ್ಟಿದೆ ಎಂದು ದಾಖಲಿಸಿದ್ದಾರೆ.’

ರೈತರ ಇಂತಹ ಪರಿಸರ ಸ್ನೇಹಿ ತಂತ್ರಜ್ಞಾನಗಳಿಂದ ಪರೋಕ್ಷವಾಗಿ ಕೆರೆ, ಬಾವಿಗಳಿಗೆ ಮರುಜೀವ ಬರಲು ಸಾದ್ಯವಾಯಿತು, ಹರಿಯುವ ನದಿ ನೀರನ್ನು ಅಲ್ಪ ಪ್ರಮಾಣದಲ್ಲಿ ತಡೆ ಹಿಡಿಯುವುದರಿಂದ ಈ ನೀರು ಅಂತರ್ಜಲದ ಮೂಲಕ ಸಾಗಿ ಕೆರೆ, ಬಾವಿಗಳಲ್ಲಿ ಶೇಖರಗೊಳ್ಳುವುದರಿಂದ ಕುಡಿಯಲು ಪರಿಶುದ್ಧ ನೀರು ದೊರಕಿದಂತಾಗುತ್ತದೆ. ಇತ್ತೀಚಿಗಿನ ದಿನಗಳಲ್ಲಿ ಕೊಳವೆ ಬಾವಿಗಳಿಂದ  ಮಿತಿಯಿಲ್ಲದೆ ನೀರನ್ನು ತೆಗೆಯುತ್ತಿರುವ ಪರಿಣಾಮ ಜಗತ್ತಿನ ಎಲ್ಲಾ ಭಾಗದಲ್ಲೂ ಅಂತರ್ಜಲದ ಪ್ರಮಾಣ ಒಂದೇ ಸಮನೆ ಕುಸಿಯತೊಡಗಿದೆ.

ಇಡೀ ಭಾರತದಲ್ಲಿ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಅಂತರ್ಜಲ ಕುಸಿದಿರುವ ನಗರಗಳೆಂದರೆ, ಒಂದು ಬೆಂಗಳೂರು, ಇನ್ನೊಂದು ಅಹಮದಾಬಾದ್ ನಗರ. 1946ರಲ್ಲಿ ಭೂಮಿಯಿಂದ ಕೇವಲ 25 ಅಡಿ ಆಳದಲ್ಲಿ ದೊರೆಯುತಿದ್ದ ನೀರು ಈ ಎರಡು ನಗರಗಳಲ್ಲಿ ಕೆಲವೆಡೆ 1500 ಆಳಕ್ಕೆ ಇಳಿದಿದೆ. ಕರ್ನಾಟಕದ ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶ ಕೂಡ ಅಪಾಯಕಾರಿ ಸ್ಥಿತಿ ತಲುಪಿದೆ.

ಅಂತರ್ಜಜಲಕ್ಕೆ ಧಕ್ಕೆಯಾಗದಂತೆ ಎತ್ತರದ ಗುಡ್ಡಗಳಲ್ಲಿ ಸುರಂಗ ಕೊರೆದು ಅಲ್ಲಿಂದ ಕೆಳಗಿನ ಪ್ರದೇಶದ ಬಾವಿಗಳಿಗೆ ನೀರು ಹರಿಸಿ ಶೇಖರಿಸಿ ಇಟ್ಟುಕೊಳ್ಳುವ ದೇಶಿ ತಂತ್ರ ಜ್ಞಾನವೊಂದು ನಮ್ಮ ಪೂರ್ವಿಕರಲ್ಲಿ ಬಳಕೆಯಲ್ಲಿತ್ತು  ಈಗಲೂ ಇಂತಹದ್ದನ್ನು ಶಿರಸಿ, ಸಿದ್ದಾಪುರ ಮುಂತಾದ ಘಟ್ಟಪ್ರದೇಶಗಳಲ್ಲಿ ಕಾಣಬಹುದು. ಈ ತಂತ್ರಜ್ಞಾನ ಇರಾನ್, ಮಧ್ಯಪ್ರಾಚ್ಯದ ರಾಷ್ಟ್ರಗಳು, ಚಿಲಿ, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲಿ ಆಚರಣೆಯಲ್ಲಿತ್ತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ. ಅದರೆ ಇವೆಲ್ಲವೂ 1970 ರ ನಂತರ ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆ ಕಾಣೆಯಾದವು. ಗೃಹ ಬಳಕೆ ಮತ್ತು ಕೈಗಾರಿಕೆಗಳ ಬಳಕೆಗಾಗಿ ದಿನೇ ದಿನೇ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಕೊಳವೆ ಬಾವಿ ಮೂಲಕ ಒಂದೇ ಸಮನೆ ನೀರನ್ನು ಎತ್ತಲಾಗುತ್ತಿದೆ. ಈ ಬಾವಿಗಳಿಗೆ ಮಳೆನೀರನ್ನು ಸಂಗ್ರಹಿಸಿ ಇಂಗಿಸುವ ತಂತ್ರಜ್ಞಾನವನ್ನು ನಾವು ನಿರ್ಲಕ್ಷಿಸುತ್ತಾ ಬಂದಿದ್ದೇವೆ. ಭೂಮಿಯ ಅಂತರ್ಜಲ ಕಾಪಾಡುವ ನಿಟ್ಟಿನಲ್ಲಿ ನಾವು ನಮ್ಮ ನಡುವೆ ಇರುವ ಕೆರೆ, ಬಾವಿ ಕೊಳ, ನೀರಿನ ತಾಣ ಇವುಗಳಿಗೆ ಮರುಜೀವ ನೀಡಬೇಕಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಎಲ್ಲಾ ಸರ್ಕಾರಗಳು ಮನೆ ನಿರ್ಮಾಣದ ಪರವಾನಗಿ ನೀಡುವ ಸಂದರ್ಭದಲ್ಲಿ ಮಳೆನೀರು ಸಂಗ್ರಹವನ್ನು ಖಡ್ಡಾಯ ಮಾಡಿವೆ. ಚೆನ್ನೈ ನಗರ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ನೀರಿನ ವಿಷಯದಲ್ಲಿ ಅದು ಕುಡಿಯುವ ನೀರಿರಲಿ, ಅಥವಾ ಕೃಷಿ ಬಳಕೆಯದಾಗಿರಲಿ ಬಳಸುವಾಗ ಅದರ ಇತಿ ಮಿತಿಯನ್ನು ನಾವು ಮೊದಲು ಅರಿಯಬೇಕಾಗಿದೆ. ನಮ್ಮ ಪೂರ್ವಿಕರ ಮಿತಬಳಕೆಯ ಸೂತ್ರಗಳು ನಮಗೆ ಮಾದರಿಯಾಗಿವೆ. ಏಷ್ಯಾ ರಾಷ್ಟ್ರಗಳು ಮತ್ತು ಆಪ್ರಿಕಾದ ಸಹರಾ ಮರುಭೂಮಿಯಂಚಿನ ರಾಷ್ಟ್ರಗಳಲ್ಲಿ ಶತ ಶತಮಾನಗಳ ಪೂರ್ವದಿಂದಲೂ ನಮ್ಮ ಜನಪದರು ಈ ಪದ್ಧತಿಯನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದರು.

ಈಶಾನ್ಯ ಭಾರತದ ರಾಜ್ಯಗಳು, ನೇಪಾಳ, ಥಾಯ್ಲೆಂಡ್ ಪಿಲಿಪೈನ್ಸ್ ಮುಂತಾದ ರಾಷ್ಟ್ರಗಳ ಪ್ರದೇಶಗಳಲ್ಲಿ ಬೀಳುವ ಪ್ರತಿ ಮಳೆ ನೀರಿನ ಹನಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ದೇಶಿ ತಂತ್ರಜ್ಞಾನ ಬಳಕೆಯಲ್ಲಿದೆ. ಹಾಗಾಗಿ ಇಲ್ಲಿ ನದಿಯ ಶೋಷಣೆ ಎಂಬ ಪ್ರಶ್ನೆಯೇ ಉದ್ಭವವಾಗಿಲ್ಲ. ತಾಂಜೇನಿಯಾದ ಕಿಲಿಮಾಂಜರೊ ಕಣಿವೆ ಪ್ರದೇಶದಲ್ಲಿ ಅಲ್ಲಿನ ಜನ ಗುಡ್ಡ ಪ್ರದೇಶದಲ್ಲಿ ಬಿದ್ದ ಮಳೆ ನೀರನ್ನು ಸಂಗ್ರಹಿಸಿ ಇಳಿಜಾರಿನ ಪ್ರದೇಶದಲ್ಲಿ ಬೇಸಾಯ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗುವಂತಹದ್ದು.

ಚೀನಾ, ಥಾಯ್ಲೆಂಡ್, ವಿಯಟ್ನಾಂ, ಇಂಡೋನೇಷಿಯಾ ಮುಂತಾದ ರಾಷ್ಟ್ರಗಳಲ್ಲಿ ಕಿರುತೊರೆ ಅಥವಾ ನದಿಗಳಿಗೆ ಬಿದರಿನ ಹಂದರಗಳಿಗೆ ಪ್ರಾಣಿಗಳ ಚರ್ಮ ಇಲ್ಲವೇ ಬೇರುಗಳಿಂದ ಎಣೆದ ಚಾಪೆಯನ್ನು ಹೊದಿಸಿ ಅವುಗಳನ್ನು ಅಡ್ಡಲಾಗಿ ನಿಲ್ಲಿಸಿ, ಶೇಖರವಾಗುವ ನೀರನ್ನು ವ್ಯವಸಾಯದ ಭೂಮಿಗೆ ಹರಿಸುವ ಪದ್ಧತಿ ಜಾರಿಯಲ್ಲಿದೆ. ಪ್ರವಾಹದ ಸಂದರ್ಭದಲ್ಲಿ ಇವುಗಳನ್ನು ತೆಗೆದು ಹಾಕಲಾಗುತ್ತದೆ. ಯಾವುದೇ ಖರ್ಚಿಲ್ಲದ ಈ ದೇಶೀ ತಂತ್ರಜ್ಞಾನ ರೈತರ ಪಾಲಿಗೆ ವರದಾನವಾಗಿದ್ದು, ಇವತ್ತಿಗೂ ಅರಣ್ಯವಾಸಿಗಳು ಭಾರತದಲ್ಲೂ ಈ ಪದ್ಧತಿಯನ್ನು ಅನುಸರಿಸುತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದುಪ್ಪಟ್ಟಾದ ಅಣೆಕಟ್ಟು ಮತ್ತು ನೀರಾವರಿ ಯೋಜನೆಗಳ ವೆಚ್ಚ, ಮತ್ತು ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದಿಂದಾಗಿ ಅಣೆಕಟ್ಟು ತಂತ್ರಜ್ಞರು ಹಾಗೂ ಕೃಷಿ ವಿಜ್ಞಾನಿಗಳು ಈವರೆಗೆ ಪ್ರತಿಪಾದಿಸಿಕೊಂಡು ಬಂದಿದ್ದ ತಂತ್ರಜ್ಞಾನವನ್ನು ಬದಿಗೊತ್ತಿ ಪರ್ಯಾಯ ತಂತ್ರಜ್ಞಾನಗಳ ಬಗ್ಗೆ ಮರು ಚಿಂತನೆ ಆರಂಭಿಸಿದ್ದಾರೆ. ಇಂತಹ ಆಲೋಚನೆಗಳ ಬಗ್ಗೆ ವಿಶ್ವಬ್ಯಾಂಕ್ ಕೂಡ  ಆಸಕ್ತಿ ತಾಳಿದೆ.

ಈ ಆಲೋಚನೆಯ ಮಾದರಿಗಳೆಂದರೆ, ಎಲ್ಲಾ ನೀರು ಕುರಿತ ಯೋಜನೆಗಳಿಗೆ ನದಿಗಳನ್ನೇ ಅವಲಂಬಿಸುವ ಬದಲು ನಿಸರ್ಗದ ಕೊಡುಗೆಯಾದ ಮಳೆನೀರನ್ನು ಪರಿಣಾಮಕಾರಿಯಾಗಿ,  ಕೃಷಿ ಚಟುವಟಿಕೆಗೆ ಮತ್ತು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವುದೇ ಆಗಿದೆ. 1995ರಲ್ಲಿ ವಿಶ್ವಬ್ಯಾಂಕ್ ತನ್ನ 50 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪರ್ಯಾಯ ಚಿಂತನೆಗಳಿಗೆ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಪ್ರಕಟಿಸಿತು.

ನಮ್ಮ ಪ್ರಾಚೀನ ನೀರಿನ ಬಳಕೆಯ ಮೂಲಸೂತ್ರವೆಂದರೆ, ನೀರಿನ ಮೇಲೆ ಎಲ್ಲರಿಗೂ ಇರುವ ಸಾಮುದಾಯಿಕ ಹಕ್ಕು. ಇದರಿಂದ ನೀರಿನ ದುರ್ಬಳಕೆ ಮತ್ತು ಶೋಷಣೆ ತಪ್ಪುತ್ತದೆ. ನೀರು ಖಾಸಗೀಕರಣ ಅಥವಾ ನೀರಾವರಿ ಯೋಜನೆಗಳ ಖಾಸಗೀಕರಣದಿಂದ ನದಿಯಷ್ಟೇ ಅಲ್ಲ ಭೂಮಿಯ ಶೋಷಣೆ ಕೂಡ ನಿರಂತರವಾಗಿ ಮುಂದುವರಿಯುತ್ತದೆ. ಇಂತಹ ಶೋಷಣೆಗಳನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಗ್ರಾಮ ಸಮುದಾಯಗಳು ಮಿತವಾಗಿ ಅವಶ್ಯಕತೆಗೆ ತಕ್ಕಂತೆ ನೆಲ ಜಲ ಇವುಗಳನ್ನು ಬಳಸಿಕೊಳ್ಳಲು ಮುಂದಾಗಿವೆ. ಇಂತಹ ಮಾದರಿಗಳು ಎಲ್ಲೆಡೆ ಯಶಸ್ವಿಯಾಗಿವೆ.

ಗುಜರಾತ್ ರಾಜ್ಯದ ದಹೂದ್ ಜಿಲ್ಲೆಯ ಮಹುದಿ ಎಂಬ ಗ್ರಾಮ, ಮಧ್ಯಪ್ರದೇಶದ ಧರ್ ಎಂಬ ಜಿಲ್ಲೆಯ ಹಲವು ಗ್ರಾಮಗಳು, ಗುಜರಾತ್‌ನ ರಾಜ್‌ಕೋಟ್ ಬಳಿಯ ಸಮಾಧಿಯಾಲ ಗ್ರಾಮ, ಕಛ್ ಜಿಲ್ಲೆಯ ಗಾಂಧಿಗ್ರಾಮ್, ರಾಜ್‌ಕೋಟ್ ಜಿಲ್ಲೆಯ ಮಾಂಡಲಿಕ್ಪುರ್, ಜಾಬುವ ಜಿಲ್ಲೆಯ ಗೆಲಾರ್ ಚೋಟಿ ಮುಂತಾದ ಗ್ರಾಮಗಳ ಯಶಸ್ಸಿನ ಕಥೆ ನಮ್ಮ ಮುಂದಿದೆ. ಇವುಗಳ ಜೊತೆಗೆ ಇಸ್ರೇಲ್‌ನ ಹನಿ ನೀರಾವರಿ ಪದ್ಧತಿಯಂತೆ ನಮ್ಮ ಈಶಾನ್ಯ ಭಾರತ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಬಿದಿರು ಬೊಂಬುಗಳ ಮೂಲಕ ನೀರನ್ನು ಗಿಡಗಳ ಬುಡಕ್ಕೆ ಮಿತವಾಗಿ ತಲುಪಿಸುವ ವ್ಯವಸ್ಥೆ ಇಂದಿಗೂ ಆಚರಣೆಯಲ್ಲಿದೆ. ಇಂತಹುಗಳ ಜೊತೆ ಭೂಮಿಗೆ ನೀರು ಸಿಂಪಡಿಸುವ ಹೊಸ ಪದ್ಧತಿ ಕೃಷಿ ಚಟುವಟಿಕೆಯಲ್ಲಿ ನೀರು ಪೋಲಾಗದಂತೆ ತಡೆಯಬಲ್ಲದ್ದಾಗಿದೆ. ಇದರಿಂದ ವಿಶೇಷವಾಗಿ ತರಕಾರಿ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಯಬಹುದಾಗಿದೆ.

ಜಗತ್ತಿನ 700 ಕೋಟಿ ಜನಸಂಖೈಯಲ್ಲಿ 200 ಕೋಟಿಗೂ ಅಧಿಕ ಜನತೆ ಕುಡಿಯಲು ಶುದ್ಧ ನೀರಿಲ್ಲದೆ, ಕಲ್ಮಶ ನೀರು ಕುಡಿದು ಹಲವಾರು ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಆಧುನಿಕತೆ ಮತ್ತು ನಾಗರೀಕತೆಯ ನೆಪದಲ್ಲಿ ನಗರಗಳಲ್ಲಿ ಕುಡಿಯುವ ನೀರನ್ನು ಜನತೆ ತಮ್ಮ ಕೈ ತೋಟಕ್ಕೆ ಹಾಗೂ ಕಾರು ತೊಳೆಯಲು ಉಪಯೋಗಿಸುವುದರ ಮೂಲಕ ದುಂದು ವೆಚ್ಚ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ನೀರು ಸರಬರಾಜುವಿನ ತಾಂತ್ರಿಕ ವೈಫಲ್ಯ ಮತ್ತು ಕಡಿಮೆ ಗುಣಮಟ್ಟದ ಕೊಳವೆಗಳಿಂದಾಗಿ ಶೇ.10 ರಿಂದ ಶೇ, 30 ರವರೆಗೆ ನೀರು ಪೋಲಾಗುತ್ತಿದೆ. ನಮ್ಮ ನಗರವಾಸಿಗಳು ಅಳವಡಿಸಿಕೊಂಡಿರುವ ಶೌಚಾಲಯಗಳಲ್ಲಿ ಒಮ್ಮೆ ನೀರಿನ ಗುಂಡಿ ಒತ್ತಿದರೆ 5 ಲೀಟರ್ ನೀರು ಹೊರ ಹೋಗುತ್ತದೆ. ರಾಜಸ್ಥಾನದ ಹಳ್ಳಿಗಳಲ್ಲಿ ಅಲ್ಲ್ಲಿನ ಮಹಿಳೆ ಒಂದು ಕೊಡ ಕುಡಿಯುವ ನೀರು ತರಲು ಪ್ರತಿನಿತ್ಯ 14 ಕಿಲೊಮೀಟರ್ ನಡೆಯುತ್ತಾಳೆ. ನಗರಗಳಲ್ಲಿ  ನಾಯಿಕೊಡೆಯಂತೆ ತಲಿಯೆತ್ತುತ್ತಿರುವ ರೆಸಾರ್ಟ್ ಮತ್ತು ತಾರಾ ಹೋಟೆಲ್‌ಗಳಲ್ಲಿ ಈಜುಕೊಳದ ಮೋಜಿಗಾಗಿ ಪ್ರತಿ ನಿತ್ಯ ಲಕ್ಷಾಂತರ ಲೀಟರ್ ನೀರನ್ನು ವ್ಯಯಮಾಡಲಾಗುತ್ತಿದೆ.

ಅಮೇರಿಕಾದ ನಾಗರೀಕರು ತಮ್ಮ ಭೋಗ ಜೀವನಕ್ಕೆ ಹೆಸರಾಗಿದ್ದವರು. ಅವರುಗಳೇ ಈಗ ನೀರಿನ ರಕ್ಷಣೆಗೆ ಮುಂದಾಗಿದ್ದಾರೆ. ತಮ್ಮ ಸ್ನಾನ ಮತ್ತು ಶೌಚಾಲಯಗಳಲ್ಲಿ ಬಳಸುತ್ತಿದ್ದ ನೀರನ್ನು ಮಿತವಾಗಿ ಬಳಸಲು ಪ್ರಾರಂಭಿಸಿದ ಮೇಲೆ ಅಲ್ಲಿ ದಿನವೊಂಕ್ಕೆ ಮೂರು ಸಾವಿರ ದಶಲಕ್ಷ ಲೀಟರ್ ನೀರು ಉಳಿತಾಯವಾಗತೊಡಗಿದೆ. ಇದರಿಂದ ನೀರು ಶುದ್ಧೀಕರಣಕ್ಕಾಗಿ ಆಗುತಿದ್ದ ವಿದ್ಯುತ್‌ನಲ್ಲಿ ಅಪಾರ ಉಳಿತಾಯವಾಗಿದೆ. ನೀರು ಮತ್ತು ವಿದ್ಯುತ್‌ನ ಒಟ್ಟು  ವಾರ್ಷಿಕ  ಉಳಿತಾಯ ಲೆಕ್ಕ ಹಾಕಿದರೆ ಇದು ಕನಿಷ್ಟ ಮೂರು ವಿದ್ಯುತ್ ಆಧಾರಿತ ಅಣೆಕಟ್ಟುಗಳಿಗೆ ಸಮ ಎಂದು ಅಲ್ಲಿನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೀರಿನ ಸರಬರಾಜುವಿನಲ್ಲಿ ಇರುವ ಮುಖ್ಯ ವೈಫಲ್ಯವೆಂದರೆ, ಕೊಳವೆ ಪೈಪ್‌ಗಳ ಅಸಮರ್ಪಕ ಜೋಡಣೆ. ಇದನ್ನು ಸರಿಪಡಿಸಿದರೆ, ಈಗ ಬಳಸಲಾಗುತ್ತಿರುವ ನೀರಿನಲ್ಲಿ ಶೇ.30 ರಿಂದ ಶೇ.40 ರಷ್ಟು ನೀರನ್ನು ಉಳಿತಾಯ ಮಾಡಬಹುದು. ಇದೇ ರೀತಿ ಕೃಷಿ ಚಟುವಟಿಕೆಯ ನೀರಾವರಿ ಕಾಲುವೆಗಳನ್ನು ಸುಧಾರಿಸಿದರೆ ಅಪಾರ ಪ್ರಮಾಣದ ನೀರನ್ನು ಉಳಿತಾಯ ಮಾಡಬಹುದು

ಭಾರತಕ್ಕೆ ಹೋಲಿಸಿದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವ್ಯಕ್ತಿಯೊಬ್ಬ ದಿನವೊಂದಕ್ಕೆ 700 ಲೀಟರ್ ಬಳಕೆ ಮಾಡುತ್ತಿದ್ದು, ಇತ್ತೀಚಿಗೆ ಈ ಪ್ರಮಾಣ 530 ಲೀಟರ್‌ಗೆ ಇಳಿದಿದೆ. ಭಾರತದಲ್ಲಿ ಪ್ರತಿ ಪ್ರಜೆ ದಿನವೊಂದಕ್ಕೆ ಸರಾಸರಿ 80 ಲೀಟರ್ ನೀರು ಬಳಕೆ ಮಾಡುತ್ತಿದ್ದಾನೆ. ಮಧ್ಯ ಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಲ್ಲಿ ಕುಡಿಯುವ ನೀರಿನದು ಅತಿ ದೊಡ್ಡ ಸಮಸ್ಯೆಯಾಗಿದೆ. ಸಮುದ್ರದ ನೀರನ್ನು ಸಂಸ್ಕರಿಸುವ ವಿಧಾನ ಅತಿ ವೆಚ್ಚದಿಂದ ಕೂಡಿದ್ದು, ಈ ನೀರನ್ನು ಮಿಲಿಟರಿ ನೆಲೆ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಮಾತ್ರ ಬಳಸಲಾಗುತ್ತಿದೆ, ಸಮುದ್ರದ ನೀರನ್ನು ಅಧಿಕ ಉಷ್ಣಾಂಶದಲ್ಲಿ ಕಾಯಿಸಿ, ಅದರಲ್ಲಿನ ಉಪ್ಪಿನ ಅಂಶ ಹೊರ ತೆಗೆದು ಮತ್ತೆ ಖನಿಜಾಂಶಗಳನ್ನು ಸೇರಿಸುವ ಪ್ರಕ್ರಿಯೆ ದುಬಾರಿ ವೆಚ್ಚದ್ದಾಗಿದೆ, ಇದಕ್ಕೆ ಅಪಾರ ಪ್ರಮಾಣದ ವಿದ್ಯುತ್ ಅವಶ್ಯಕತೆ ಇದ್ದು, ಈಗ ಸೂರ್ಯನ ಶಾಖ ಮತ್ತು ಗಾಳಿಯಿಂದ ಉತ್ಪಾದಿಸುವ ವಿದ್ಯುತ್ ಕುರಿತು ಪ್ರಯೋಗಗಳು ಮುಂದುವರಿದಿವೆ.

ಮನುಷ್ಯ ತನ್ನ ಬೇಕು ಬೇಡಗಳಿಗೆ ಮಿತಿ ಹಾಕಿಕೊಳ್ಳದಿದ್ದರೆ, ಜಗತ್ತಿನ ಯಾವುದೇ ನದಿಯಿರಲಿ, ಬೆಟ್ಟವಿರಲಿ, ಕೆರೆ, ಹಳ್ಳ ಕೊಳ್ಳವಿರಲಿ, ಅರಣ್ಯವಿರಲಿ ಇವುಗಳಿಗೆ ಉಳಿಗಾಲವಿಲ್ಲ. ಆಧುನಿಕ ಜಗತ್ತಿನ ಮನುಷ್ಯನ ಮಿತಿಯಿಲ್ಲದ ಭೋಗಲಾಲಸೆಗಳಿಗೆ ಎಲ್ಲವೂ ಬಲಿಯಾಗುತ್ತಿವೆ. ತಾವು ಇದ್ದಲ್ಲೆ, ತಮಗೆ ಸಿಕ್ಕ ಅವಕಾಶದಲ್ಲಿ ಸಂತೃಪ್ತಿಯನ್ನು ಕಾಣುತ್ತಾ ನಿಸರ್ಗಕ್ಕೆ ಕೇಡಾಗದಂತೆ ಬದುಕಿದ್ದ ನಮ್ಮ ಜನಪದರ ಪ್ರಜ್ಞೆ, ಪೂರ್ವಿಕರ ಸರಳವಾದ ದೇಶಿಯ ಬದುಕು ನಮಗೆ ಬೆಳಕಿನ ಹಾದಿಯಾಗಬೇಕಿದೆ.

ಇದು ಕಥೆಯಲ್ಲ. ನನಗಿನ್ನೂ ನೆನಪಿದೆ. ಅದು 1963-64 ರ ದಿನಗಳು. ನನಗಾಗ 8 ವರ್ಷ. ನನ್ನೂರಿಗೆ ಬಿದ್ದ ಮೊದಲ ಮುಂಗಾರು ಮಳೆಯ ಮಾರನೇ ದಿನ ಮುಂಜಾನೆ ನನ್ನಪ್ಪ ನೇಗಿಲು ಮತ್ತು ನೊಗವನ್ನು ಹೊತ್ತು ಎತ್ತುಗಳ ಜೊತೆ ಹೊಲಕ್ಕೆ ಹೊರಡುತಿದ್ದ. ನಾನು ಒಂದು ಸಣ್ಣ ತಂಬಿಗೆಯಲ್ಲಿ ನೀರು ತಂಬಿಕೊಂಡು ಅಪ್ಪನನ್ನು ಹಿಂಬಾಲಿಸುತಿದ್ದೆ. ತನ್ನ ಚಪ್ಪಲಿಯನ್ನ ಹೊಲದ ಹೊರಗೆ ಬಿಟ್ಟು ಅಪ್ಪ ದನಗಳಿಗೆ ನೇಗಿಲು ಹೂಡಿ ನಂತರ ಮೂರು ಸಣ್ಣ ಕಲ್ಲುಗಳನ್ನು ಆಯ್ದು ತಂದು ಅವುಗಳನ್ನ ನೀರಿನಿಂದ ತೊಳೆಯುತಿದ್ದ. ತನ್ನ ಚಡ್ಡಿ ಜೇಬಿನಿಂದ ಅರಿಶಿನ ಕುಂಕುಮ ತೆಗೆದು ಅವುಗಳಿಗೆ ಬಳಿದು ಹೊಲದ ಬದುವಿನ ಮೇಲೆ ಸಾಲಾಗಿ ಇರಿಸಿ ಗರಿಕೆ ಹುಲ್ಲು ತಂದು ಇಟ್ಟು ಅವುಗಳನ್ನು ಕರ್ಪೂರ ಮತ್ತು ಊದುಬತ್ತಿ ಹಚ್ಚಿ ಪೂಜಿಸುತಿದ್ದ. ನಂತರ ಹೊಲ ಉಳಲು ಪ್ರಾರಂಭಿಸುತಿದ್ದ. ಹೊಲದಲ್ಲಿ ಬಿದ್ದಿದ್ದ ಸಾಮಾನ್ಯ ಕಲ್ಲುಗಳು ಅಪ್ಪನ ಕೈಯಲ್ಲಿ ದೇವರಾಗುವ ಬಗೆ ನನಗೆ ಆಗ ಕುತೂಹಲ ಮತ್ತು ವಿಸ್ಮಯ ಮೂಡಿಸುತಿತ್ತು. ತಾನು ಇದ್ದಲ್ಲೇ ದೇವರನ್ನು ಕಾಣುವ, ಸೃಷ್ಟಿಸುವ ನಮ್ಮ ಹಿರಿಯರ ತಾಕತ್ತು ಮತ್ತು ಚಿಂತನೆ ನನಗೀಗ ಅರ್ಥವಾಗುತ್ತಿದೆ. ನಮ್ಮ ಜನಪದರ ಇಂತಹ ಆದರ್ಶನೀಯವಾದ ಬದುಕು ಜಗತ್ತಿನ ಯಾವ ಜೀವ ಜಾಲಕ್ಕೂ ಮಾರಕವಾಗಿರಲಿಲ್ಲ. ಇದರಿಂದಾಗಿ ಎಲ್ಲಾ ಜೀವ ನದಿಗಳಷ್ಟೇ ಅಲ್ಲ, ಪರಿಸರದ ಪ್ರಾಣಿ ಪಕ್ಷಿಗಳು ಬದುಕಿ ಕೊಂಡಿದ್ದವು.

(ಮುಂದುವರೆಯುವುದು)

ಜೀವನದಿಗಳ ಸಾವಿನ ಕಥನ – 21


– ಡಾ.ಎನ್. ಜಗದೀಶ್ ಕೊಪ್ಪ


ಅಣೆಕಟ್ಟುಗಳ ನೆಪದಲ್ಲಿ ಜೀವನದಿಗಳನ್ನ ಕೊಲ್ಲುತ್ತಿರುವ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಜಗತ್ತಿನಾದ್ಯಂತ ವ್ಯಾಪಕವಾಗಿ ಪ್ರತಿಭಟನೆಗಳು ಜರುಗುತ್ತಿವೆ. ಎಲ್ಲಾ ಸರ್ಕಾರಗಳಿಗೆ ಪ್ರತಿಭಟನೆಯ ಬಿಸಿ ತಾಕತೊಡಗಿದೆ. ನದಿಗಳ ರಕ್ಷಣೆಗಾಗಿ ಅನೇಕ ಸ್ವಯಂ ಸೇವಾ ಸಂಘಟನೆಗಳು, ಕಾರ್ಯಕರ್ತರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಇತ್ತೀಚಿಗೆ ಪ್ರಭಾವಿ ಮಾಧ್ಯಮಗಳಾಗಿ ಮುಂಚೂಣಿಗೆ ಬಂದ ಫೇಸ್‌ಬುಕ್, ಗೂಗ್ಲ್ ಪ್ಲಸ್, ಮುಂತಾದ ಸಾಮಾಜಿಕ ತಾಣಗಳು, ಇ-ಮೈಲ್, ಬ್ಲಾಗ್‌ಗಳು ಪರಿಸರ ಪ್ರೇಮಿಗಳಿಗೆ ಅನುಕೂಲಕರ ವೇದಿಕೆಗಳಾಗಿ ಮಾರ್ಪಟ್ಟಿವೆ.

ಅಣೆಕಟ್ಟುಗಳನ್ನ ವಿರೋಧಿಸುವುದಾದರೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಏನು? ಎಂಬ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತರಿಸುತ್ತಿರುವ ನಗರೀಕರಣ, ನೀರು, ವಿದ್ಯುತ್‌ಗಳ ಬೇಡಿಕೆ, ಜನಸಂಖ್ಯೆಗೆ ಅನುಗುಣವಾಗಿ ಬೆಳೆಯಬೇಕಾದ ಆಹಾರ ಧಾನ್ಯ, ಇದಕ್ಕಾಗಿ ನೀರಾವರಿ ವ್ಯವಸ್ಥೆ, ಇವುಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ವರ್ತಮಾನದ ಜಗತ್ತು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನವೊಂದೇ ಉತ್ತರವಲ್ಲ. ಹಾಗೆಂದ ಮಾತ್ರಕ್ಕೆ ದಿಡೀರ್ ಪರಿಹಾರಕ್ಕೆ ಯಾವ ಮಂತ್ರ ದಂಡ ಯಾರ ಬಳಿಯೂ ಇಲ್ಲ ನಿಜ. ಆದರೆ ನಾವೀಗ ನಮ್ಮ ಪೂರ್ವಿಕರು ನಡೆದು ಬಂದ ಹಾದಿಯಲ್ಲಿ ನಾವು ಹಾದಿ ತಪ್ಪಿದ್ದು ಎಲ್ಲಿ ಎಂಬುದನ್ನ ಕಂಡುಕೊಳ್ಳುವುದರ ಮೂಲಕ ಉತ್ತರ ಹುಡಕಬೇಕಾಗಿದೆ. ನಮ್ಮನ್ನು ತಾಯಿಯಂತೆ ಪೋಷಿಸುತ್ತಿರುವ ನಿಸರ್ಗದಲ್ಲಿ, ಅದರ ಜೀವಜಾಲ ವ್ಯವಸ್ಥೆಯಲ್ಲಿ ನಮ್ಮೆಲ್ಲಾ ಪ್ರಶ್ನೆಗಳಿಗೆ ಪರಿಹಾರವಿದೆ. ಅದನ್ನು ಗ್ರಹಿಸುವ, ಅರ್ಥಮಾಡಿಕೊಳ್ಳುವ ಮನಸ್ಸುಗಳು ಬೇಕಷ್ಟೆ. ನದಿ ನೀರು ಕಲ್ಮಶವಾಗದಂತೆ ಕಾಪಾಡುವ, ಪ್ರವಾಹವನ್ನು ನಿಯಂತ್ರಿಸುವ, ಹೂಳನ್ನು ತಡೆಗಟ್ಟುವ ಬಗ್ಗೆ ನಮ್ಮ ಪೂರ್ವಿಕರು ಅನುಕರಿಸುತಿದ್ದ ಪದ್ದತಿಗಳತ್ತ ನಾವು ಗಮನ ಹರಿಸಬೇಕಾಗಿದೆ.

ನದಿಯ ನೀರಿನ ಕಲ್ಮಶಕ್ಕೆ ಮೂಲ ಕಾರಣ ಮಳೆಯ ನೀರು. ಈ ನೀರು ನೆಲಕ್ಕೆ ಬಿದ್ದಾಗ ಭೂಮಿಯಲ್ಲಿ ಇಂಗಿ ಹೋಗದೆ ನೇರವಾಗಿ ನದಿಗೆ ಸೇರುತ್ತಿದೆ. ನದಿ ಪಾತ್ರದಲ್ಲಿದ್ದ ಅರಣ್ಯ, ಗಿಡ ಮರಗಳ ನಾಶ ಮತ್ತು ನೀರಿನ ತಾಣಗಳ (ಹೊಂಡ) ನಾಶದಿಂದಾಗಿ ನದಿಗಳ ಪ್ರವಾಹ, ಹೂಳು ತುಂಬುವಿಕೆಗೆ ಕಾರಣವಾಗಿದೆ. ಅರಣ್ಯ ಹಾಗೂ ನದಿಯ ಇಕ್ಕೆಲಗಳಲ್ಲಿ ಇರುತ್ತಿದ್ದ ಗಿಡ ಮರಗಳಿಂದ ಉದುರುತಿದ್ದ ಎಲೆಗಳು ಭೂಮಿಯಲ್ಲಿ ಶೇಖರಗೊಂಡು ಮಳೆ ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ನೀರನ್ನು ಇಂಗಿಸುತಿದ್ದವು. ಗಿಡ ಮರಗಳ ಕೆಳಗೆ ಹತ್ತಿಯ ಹಾಸಿಗೆಯಂತಹ ಒಂದು ಪದರ  ನಿರ್ಮಾಣವಾಗುತ್ತಿತ್ತು. ಇದಕ್ಕೆ ಮಳೆಗಾಲದಲ್ಲಿ ಬಿದ್ದ ನೀರನ್ನು ಹರಿಯದಂತೆ ತಡೆದು ಭೂಮಿಗೆ ನೀರುಣಿಸುವ ಸಾಮರ್ಥ್ಯವಿತ್ತು. ಅದೇ ರೀತಿ ನೀರಿನ ಹೊಂಡಗಳಲ್ಲಿ ಮಳೆ ನೀರು ಶೇಖರವಾಗಿ ಅಂತರ್ಜಲ ಹೆಚ್ಚಲು ಸಹಕಾರಿಯಾಗುತ್ತಿತ್ತು. ಜೊತೆಗೆ ನದಿಗಳ ದಡದ ಇಕ್ಕೆಲಗಳಲ್ಲಿ ಬೆಳೆದ ಗಿಡ ಮರಗಳ ಬೇರುಗಳು ಮಣ್ಣು ಕುಸಿದು ನದಿಗೆ ಸೇರದಂತೆ ತಡೆದು ಹಿಡಿದಿಟ್ಟುಕೊಳ್ಳುತ್ತಿದ್ದವು. ಪರಿಸರದ ಸ್ವಯಂಕೃತವಾದ ಈ ವ್ಯವಸ್ಥೆಯ ಬಗ್ಗೆ ಪೂರ್ಣ ಅರಿವಿದ್ದ ನಮ್ಮ ಪೂರ್ವಿಕರು ನಿಸರ್ಗದ ನೈಜ ಚಟುವಟಿಕೆಗೆ ಕೈ ಹಾಕದೇ ಹಾಗೇ ಪೋಷಿಸಿಕೋಡು ಬಂದಿದ್ದರು.

ಇಂದಿನ ಆಧುನಿಕ ಅಭಿವೃದ್ಧಿಯ ಅಂಧಯುಗದಲ್ಲಿ ನಗರೀಕರಣ ರಭಸದಿಂದ ಸಾಗುತ್ತಿರುವಾಗ, ನಿಸರ್ಗವಿರುವುದೇ ನಮಗಾಗಿ ಎಂಬ ಅಹಂಕಾರ ನಮ್ಮಲ್ಲಿ ಮನೆ ಮಾಡಿರುವಾಗ, ಅರಣ್ಯ, ನೀರಿನ ತಾಣ, ಗಿಡ ಮರ ಅವನತಿಯತ್ತಾ  ಸಾಗಿ ನದಿಗಳು ಈಗ ನಗರ ಪಟ್ಟಣಗಳ ಕೊಳಚೆ ನೀರನ್ನು ಸಾಗಿಸುವ ವ್ಯವಸ್ಥೆಗಳಾಗಿ ಮಾರ್ಪಟ್ಟಿವೆ. ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಪ್ರತಿಪಾದಿಸುವ ಸರ್ಕಾರಗಳು, ತಜ್ಞರು ನಮ್ಮ ಮುಂದಿಡುವ ವಾದವೆಂದರೆ, ನದಿಗಳ ಪ್ರವಾಹ ನಿಯಂತ್ರಣ ಮತ್ತು ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ನೀರು ಸಂಗ್ರಹಿಸುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಇವರ ದೃಷ್ಟಿಯಲ್ಲಿ ಸಣ್ಣ ಮಟ್ಟದ ಜಲಾಶಯಗಳು ನಿಷ್ಪ್ರಯೋಜಕ. ನಿಸರ್ಗದ ಇತಿಹಾಸ ಬಲ್ಲವರು, ಅದರ ಚಟುವಟಿಕೆ ಅರ್ಥ ಮಾಡಿಕೊಂಡವರು ಆಧುನಿಕ ತಂತ್ರಜ್ಞಾನವನ್ನು ಒಪ್ಪುವುದಿಲ್ಲ. ಅಣೆಕಟ್ಟುಗಳ ಮೊದಲಿಗೆ ಇದ್ದ ನೀರಿನ ತಾಣಗಳು, ಅವು ಸಣ್ಣ ಸ್ವರೂಪದವುಗಳಾಗಿದ್ದು, ಕೊಳವಾಗಿರಲಿ, ಕೆರೆಯಾಗಿರಲಿ ಇವುಗಳ ಮಹತ್ವವನ್ನು ಅರಿಯದವರು ಮಾತ್ರ ದೊಡ್ಡ ಅಣೆಕಟ್ಟುಗಳ ಬಗ್ಗೆ ಮಾತನಾಡುತ್ತಾರೆ.

ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿಕೊಂಡು ಭೂಮಿಯ ಅಂತರ್ಜಲ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದ ಇವುಗಳು ನೀರಿನ ಕಲ್ಮಶವನ್ನು ತಡೆಗಟ್ಟಿ ನದಿಗೂ ಪರಿಶುದ್ಧ ನೀರನ್ನು ಹರಿಯಬಿಡುತಿದ್ದವು. ಈಗಲೂ ಕೂಡ ಆಳವಾದ ನದಿಗಳ ದಡದಲ್ಲಿ ಈ ರೀತಿಯ ನೀರು ಜಿನುಗುವುದರ ಮೂಲಕ ನದಿ ಸೇರುವುದನ್ನು ನಾವು  ಕಾಣಬಹುದು. ಅರಣ್ಯ ನಾಶ ಕೇವಲ ಅಂತರ್ಜಲ ಕೊರತೆಗೆ ಮಾತ್ರ ಕಾರಣವಾಗಿಲ್ಲ, ಆಯಾ ಪ್ರದೇಶದಲ್ಲಿ ಬೀಳುತ್ತಿದ್ದ ಸರಾಸರಿ ಮಳೆಯ ಪ್ರಮಾಣದ ಕುಸಿತಕ್ಕೂ ಕಾರಣವಾಗಿದೆ. ಅರಣ್ಯ ಮತ್ತು ಗಿಡ ಮರಗಳ ನಾಶದಿಂದ ಭೂಮಿಯ ಮೇಲಿರುತಿದ್ದ ಎಲೆಗಳ ಹೊದಿಕೆ ನಾಶವಾಗಿ ಮಳೆಯ ನೀರಿಗೆ ಭೂಮಿಯ ಮೇಲ್ಪದರು ಕೊಚ್ಚಿ ಹೋಗಿ ನದಿಗೆ ಸೇರ್ಪಡೆಯಾಗುತ್ತಿದೆ. ಇದು ಪರೋಕ್ಷವಾಗಿ ನದಿಗಳಲ್ಲಿ ಹೂಳು ಶೇಖರವಾಗಲು ಕಾರಣವಾಗುತ್ತಿದೆ. ಇದಕ್ಕೆ ಜೀವಂತ ಉದಾಹರಣೆಯಂದರೆ, ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಹೆಸರಾಗಿದ್ದ ಈಶಾನ್ಯ ಭಾರತದ ಚಿರಾಪುಂಜಿಯಲ್ಲಿ ವರ್ಷವೊಂದಕ್ಕೆ ಸರಾಸರಿ 900 ಮಿಲಿ ಮೀಟರ್ ಮಳೆಯಾಗುತ್ತಿತ್ತು. ಅಲ್ಲಿನ ಅರಣ್ಯನಾಶದಿಂದಾಗಿ ಈಗ ಮಳೆಯ ಪ್ರಮಾಣ 400 ರಿಂದ 530 ಮಿಲಿ ಮೀಟರ್‌ಗೆ ಕುಸಿದಿದೆ.

ಅರಣ್ಯದಲ್ಲಿ ಬೆಳೆಯುತಿದ್ದ ದಟ್ಟವಾದ ಹುಲ್ಲು ಮಳೆ ನೀರಿಗೆ ಭೂಮಿಯ ಮಣ್ಣು ಕೊಚ್ಚಿ ಹೋಗದಂತೆ ತಡೆಯುತ್ತಿತ್ತು. ಅರಣ್ಯ ಬರಿದಾದ ಮೇಲೆ ಮಳೆನೀರಿನ ಜೊತೆ ಹರಿಯುತ್ತಿರುವ ಮಣ್ಣು ನದಿಯ ಒಡಲು ಸೇರುತ್ತಿದೆ. ಜಗತ್ತಿನಾದ್ಯಂತ 1990ರ ದಶಕದಲ್ಲಿ ವರ್ಷವೊಂದಕ್ಕೆ ಒಂಬೈನೂರು ಕೋಟಿ ಟನ್ ಮಣ್ಣು ನದಿಗಳಿಗೆ ಸೇರ್ಪಡೆಯಗುತ್ತಿತ್ತು. ಈಗ ಅದರ ಪ್ರಮಾಣ ನಾಲ್ಕುವರೆ ಸಾವಿರ ಕೋಟಿ ಟನ್‌ಗೆ ಏರಿಕೆಯಾಗಿದೆ. ನದಿ ಮತ್ತು ಅದರ ನೀರಿನ ರಕ್ಷಣೆಗೆ ಇರುವ ಏಕೈಕ ಪರ್ಯಾಯವೆಂದರೆ, ಕೃಷಿನೀರಿನ ತಾಣ ಮತ್ತು ಅರಣ್ಯದ ರಕ್ಷಣೆ ಮಾತ್ರ.  ಇವುಗಳಿಂದಾಗಿ ಜೈವಿಕ ಪರಿಸರ ಸಮತೋಲನದಲ್ಲಿರುತ್ತದೆ. ಬಹುತೇಕ ಸರ್ಕಾರಗಳು ಕಾಯ್ದಿಟ್ಟ ಅರಣ್ಯ ಅಥವಾ ರಾಷ್ಡೀಯ ಉದ್ಯಾನವನ ಎಂಬ ಯೋಜನೆಯಡಿ ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿವೆ. ಇವರನ್ನು ಹೊರಹಾಕುವ ಹಿಂದೆ ಮರಗಳ್ಳರ ಮಾಫಿಯ ಜೊತೆ ಅಧಿಕಾರಿಗಳು ಕೈಜೋಡಿಸಿದ್ದಾರೆ.

ಅರಣ್ಯಕ್ಕಾಗಲಿ, ಅಲ್ಲಿನ ಪರಿಸರ ಅಥವಾ ಪ್ರಾಣಿಗಳ ಬದುಕಿಗೆ ಧಕ್ಕೆಯಾಗದಂತೆ ಅರಣ್ಯದ ಕಿರು ಉತ್ಪನ್ನಗಳನ್ನು ನಂಬಿ ಶತಮಾನಗಳುದ್ದಕ್ಕೂ ಅದರ ರಕ್ಷಕರಂತೆ ಬಾಳಿದ್ದ ಇವರು ಈಗ ಅಕ್ಷರಶಃ ಅನಾಥರು. ಇವರನ್ನು ಅರಣ್ಯದಿಂದ ಹೊರ ಹಾಕಿದ ನಂತರ ಅರಣ್ಯ ಮತ್ತಷ್ಟು ನಾಶವಾಗಿದೆಯೇ ಹೊರತು ಉದ್ಧಾರವಾಗಿಲ್ಲ. ಈಗ ಭಾರತ ಸರ್ಕಾರ  ಅರಣ್ಯವಾಸಿಗಳಿಗೆ ಹಕ್ಕನ್ನು ದಯಪಾಲಿಸಿದ್ದು ಯಾವ ಸರ್ಕಾರಗಳೂ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಅರಣ್ಯದ ಕಿರು ಉತ್ಪನ್ನಗಳ ಜೊತೆ ಜೀವಿಸುವ ಹಕ್ಕನ್ನು ಬಿಳಿಗಿರಿರಂಗನ ಬೆಟ್ಟದ ಸೋಲಿಗರು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಇವರ ಅಭಿವೃದ್ಧಿಗಾಗಿ ಕಳೆದ ನಲವತ್ತು ವರ್ಷಗಳಿಂದಲೂ ದುಡಿಯುತ್ತಿರುವ ಡಾ. ಹೆಚ್. ಸುದರ್ಶನ್‌ರವರ ಪರಿಶ್ರಮವಿದೆ. ಇವರಂತೆ ಹಲವಾರು ಸಮಾಜ ಸೇವಕರು ಒರಿಸ್ಸಾ, ಮಧ್ಯಪ್ರದೇಶ, ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಕೆಲಸ ಮಾಡುತಿದ್ದು, ಇವರಿಗೆ ದೆಹಲಿ ಮೂಲದ ಪರಿಸರಕ್ಕೆ ಮೀಸಲಾದ “ಡೌನ್ ಟು ಅರ್ಥ್” ಮಾಸಪತ್ರಿಕೆ ಬೆನ್ನೆಲುಬಾಗಿ ನಿಂತಿದೆ.

ಭೂಮಿಯ ಮೇಲಿನ ಮಣ್ಣಿನ ಪದರು ನಾಶವಾಗದಂತೆ ತಡೆಗಟ್ಟಲು ನಮ್ಮ ಪೂರ್ವಿಕರು ಅನುಸರಿಸುತಿದ್ದ ಸಾಂಪ್ರದಾಯಿಕ ದೇಶಿ ಕೃಷಿ ಪದ್ಧತಿ ಇವತ್ತಿಗೂ ನಮಗೆ ಮಾದರಿಯಾಗಬಲ್ಲದು. ಈ ಪದ್ಧತಿಯಲ್ಲಿ ರೈತರು ಬೇಸಾಯದ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಋತುಮಾನಗಳಿಗೆ ಅನುಗುಣವಾಗಿ ಬೆಳೆಯುತ್ತಿದ್ದರಿಂದ ಭೂಮಿಯ ಫಲವತ್ತತೆಯ ಜೊತೆಗೆ ಮಣ್ಣು ಕೊಚ್ಚಿ ಹೋಗದಂತೆ ದ್ವಿದಳ ಧಾನ್ಯಗಳ ಬೆಳೆಗಳ ಬೇರುಗಳು ತಡೆಯುತ್ತಿದ್ದವು. ಗುಡ್ಡಗಾಡು ಇಲ್ಲವೆ ಇಳಿಜಾರು ಪ್ರದೇಶದಲ್ಲಿ ಕೃಷಿಕರು ಭೂಮಿಯನ್ನು ಹಂತ ಹಂತವಾಗಿ ಮೆಟ್ಟಿಲುಗಳ ಆಕಾರದಲ್ಲಿ ವಿನ್ಯಾಸಗೊಳಿಸಿ ಬೇಸಾಯ ಮಾಡುತ್ತಿದ್ದುದ್ದರಿಂದ ಮಳೆನೀರು ಬಿದ್ದ ಸ್ಥಳದಲ್ಲೇ ಭೂಮಿಗೆ ಸೇರುತಿತ್ತು.

ದೇಶಿ ಕೃಷಿ ಪದ್ಧತಿಯಲ್ಲಿ ರೈತರು ಸಾವಯವ ರೀತಿಯನ್ನು ಅಳವಡಿಸಿಕೊಂಡು ಯಾವುದೇ ರಸಾಯನಿಕ ಗೊಬ್ಬರ ಅಥವಾ ಕೀಟನಾಶಕ ಬಳಸುತ್ತಿರಲಿಲ್ಲ. ಇದರಿಂದಾಗಿ ಜೈವಿಕ ಜೀವಜಾಲಕ್ಕೆ, ಮತ್ತು  ಬೆಳೆಗಳಿಗೆ ಆವರಿಸುತ್ತಿದ್ದ ಕೀಟಗಳ ಭಕ್ಷಣೆಗೆ ಬರುತಿದ್ದ ಪಕ್ಷಿ ಪ್ರಭೇದಗಳಿಗೆ ತೊಂದರೆಯಾಗುತ್ತಿರಲಿಲ್ಲ. ಇಂತಹ ಕೃಷಿ ಪದ್ಧತಿಯನ್ನು ನಾವು ಇಂದಿಗೂ ಗುಡ್ಡಗಾಡು ಪ್ರದೇಶದ ಅರಣ್ಯವಾಸಿಗಳಲ್ಲಿ ಕಾಣಬಹುದು. ಅವರು ಒಂದು ಪ್ರದೇಶದಲ್ಲಿ ಬೆಳೆ ತೆಗೆದ ನಂತರ ಆ ಭೂಮಿಯನ್ನ ವರ್ಷಗಟ್ಟಲೆ ಹಾಗೆ ಬಿಟ್ಟು ಬೇರೊಂದು ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಇದು ಭೂಮಿಯ ಫಲವತ್ತತೆ ಕಾಪಾಡಲು ಅವರು ಅನುಕರಿಸುತ್ತಿದ್ದ ತಂತ್ರ.

ಆಧುನಿಕ ಯುಗದಲ್ಲಿ ರೂಪುಗೊಳ್ಳುತ್ತಿರುವ ಜಲಾಶಯಗಳು, ನೀರಾವರಿ ಕಾಲುವೆಗಳು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಕೊಂದು ಹಾಕಿದವು. ನಮ್ಮ ಸರ್ಕಾರಗಳು ರೈತರನ್ನು ಒಂದೇ ರೀತಿಯ ಬೆಳೆ ತೆಗೆಯುವಂತೆ ಒತ್ತಾಯಿಸುತ್ತಿವೆ. ರೈತರೂ ಸಹ ಹಣದ ಆಸೆಗೆ ಬಲಿ ಬಿದ್ದು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಅರಣ್ಯ, ನದಿ, ಮಳೆ, ಭೂಮಿ, ನೀರು, ಜೈವಿಕ ವೈವಿಧ್ಯ ಇವೆಲ್ಲವೂ ಒಂದಕ್ಕೊಂದು ಸರಪಳಿಯಂತೆ ಬೆಸೆದುಕೊಂಡಿದ್ದು ಒಂದು ಕೊಂಡಿ ಕಳಚಿಕೊಂಡರೆ, ಇಡೀ ವೈವಸ್ಥೆಯೆ ಕುಸಿದು ಬೀಳುವ ಸ್ಥಿತಿ. ಈ ಸೂಕ್ಷವನ್ನು ರೈತರು, ನೀರಾವರಿ ತಜ್ಙರು ಕೃಷಿವಿಜ್ಞಾನಿಗಳು ಅರಿಯಬೇಕಾಗಿದೆ.

ಪ್ರವಾಹ ನಿಯಂತ್ರಣದ ನೆಪದಲ್ಲಿ ಅಣೆಕಟ್ಟುಗಳ ಮೂಲಕ ನದಿಗಳನ್ನು ನಿಯಂತ್ರಿಸಲು ಹೊರಟಿರುವ ಆಧುನಿಕ ನೀರಾವರಿ ತಜ್ಞರು ನದಿಗಳ ಪ್ರವಾಹದ ಜೊತೆ ಬದುಕು ಸಾಗಿಸುತ್ತಿರುವ ಜನತೆಯ ಕಾರ್ಯವಿಧಾನ, ಅವರ ಕೃಷಿ ಚಟುವಟಿಕೆಗಳನ್ನು ಗಮನಿಸಬೇಕಾಗಿದೆ. ನದಿಗಳನ್ನು ಮಣಿಸಬೇಕೆ? ಅಥವಾ ಬೇಡವೆ? ಇದು ಇವತ್ತಿನ ಪ್ರಶ್ನೆಯಲ್ಲ, ಅದು ಶತಮಾನಗಳ ಉದ್ದಕ್ಕೂ ಮನುಕುಲವನ್ನು ಕಾಡಿರುವ ಪ್ರಶ್ನೆ. ಚೀನಾದ ಪ್ರಸಿದ್ಧ ಚಿಂತಕ ಚಿಯೊಜಂಗ್ ಎಂಬಾತ ನದಿಗಳ ಕುರಿತು ಈ ರೀತಿ ಬಣ್ಣಿಸಿದ್ದಾನೆ: “ನದಿಗಳೆಂದರೆ ಮಗುವಿನ ಬಾಯಿ ಇದ್ದಂತೆ. ಅದನ್ನು ಮುಚ್ಚಲು ಹೊರಟರೆ ಕರ್ಕಶ ಶಬ್ದ ಕೇಳಬೇಕು, ಇಲ್ಲವೇ ಉಸಿರುಗಟ್ಟಿ ಸಾಯುವುದನ್ನು ನೋಡುವುದಕ್ಕೆ ಸಿದ್ದವಾಗಿರಬೇಕು.”

ಚೀನಾದಲ್ಲೂ ಕೂಡ ನದಿಗಳನ್ನು ಪ್ರವಾಹದ ನೆಪದಲ್ಲಿ ಮಣಿಸಲು ಹೊರಟಾಗ ನಡೆದ ಪರ-ವಿರೋಧಗಳ ಸಂಘರ್ಷಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ನದಿಗಳು ಪ್ರವಾಹದ ಸಂದರ್ಭದಲ್ಲಿ ತುಂಬಿ ಹರಿದು ಇಕ್ಕೆಲಗಳ ಒಣಭೂಮಿಗೆ ನೀರು ಉಣಿಸುವುದರಿಂದ ತೇವಾಂಶಭರಿತ ಭೂಮಿಯಲ್ಲಿ ಅಲ್ಪಾವಧಿಯ ಬೆಳೆ ತೆಗೆಯುವ ಕಲೆಯನ್ನು ನಮ್ಮ  ಪೂರ್ವಿಕರು ಕರಗತ ಮಾಡಿಕೊಂಡಿದ್ದರು. ಇದು ಜಗತ್ತಿನ ನಾಗರೀಕತೆಯ ಇತಿಹಾಸದಿಂದ ಹಿಡಿದು ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಪ್ರವಾಹದ ನದಿಗಳಿರುವ ನಮ್ಮ ನೆರೆಯ ಬಾಂಗ್ಲಾ ದೇಶದಲ್ಲಿ ಮೇಘನಾ, ಬ್ರಹ್ಮಪುತ್ರ, ಗಂಗಾನದಿಗಳ  ಪ್ರವಾಹದ ಜೊತೆ ಅಲ್ಲಿ ಜನರ ಸಾಹಸಮಯ ಬದುಕು ಕುತೂಹಲಕಾರಿಯಾಗಿದೆ. ಪ್ರವಾಹ ಬರುವ ಮುನ್ನವೇ ನದಿಯ ಪಾತ್ರದಲ್ಲಿ 5 ರಿಂದ 8 ಅಡಿ ಎತ್ತರ ಬೆಳೆಯುವ ದೇಶಿ ಬತ್ತದ ಬೀಜವನ್ನು ಬಿತ್ತುತ್ತಾರೆ. ಪ್ರವಾಹ ಇಳಿಮುಖವಾದ ನಂತರ ಫಸಲನ್ನು ಪಡೆಯುತ್ತಾರೆ. ಅದೇ ತೇವ ಭರಿತವಾದ ಭೂಮಿಯಲ್ಲಿ ಅಲ್ಪಾವಧಿ ಬೆಳೆಗಳಾದ ಕಲ್ಲಂಗಡಿ, ಸೌತೆ. ಹಾಗೂ ಇತರೆ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ.

1850 ರಿಂದಲೂ ಸಹ ಅಮೇರಿಕಾದ ಮಿಸಿಸಿಪ್ಪಿ ನದಿ ಪ್ರಾಂತ್ಯದಲ್ಲಿ ಪ್ರವಾಹ ನಿಯಂತ್ರಣದ ಬಗ್ಗೆ ಗೊಂದಲ ಇನ್ನೂ ಮುಂದುವರಿದಿದೆ. ಅಲ್ಲಿನ ಸ್ಥಳೀಯ ನಿವಾಸಿಗಳು ಅಣೆಕಟ್ಟುಗಳು ಅಥವಾ ನೀರಾವರಿ ಕಾಲುವೆಗಳು ಇವುಗಳಿಂದ ದೂರವಾಗಿ ಒಣಭೂಮಿಯಲ್ಲಿ ಮಳೆನೀರನ್ನು ಸಂಗ್ರಹಿಸಿಟ್ಟುಕೊಂಡು ಶೇ.70 ರಷ್ಟು ಜನ ಬೇಸಾಯ ಮಾಡುತಿದ್ದಾರೆ.

ಆಪ್ರಿಕಾದ ಸಹರಾ ಮರುಭುಮಿಯ ಕನಿಷ್ಟ ಮಳೆ ಬೀಳುವ ಪ್ರದೇಶದಲ್ಲಿ ಹುಲ್ಲುಗಾವಲನ್ನು ಆಶ್ರಯಿಸಿಕೊಂಡು ಜಾನುವಾರು ಸಾಕಿಕೊಂಡು ಕಡಿಮೆ ಮಳೆ ಮತು ಉಷ್ಣವನ್ನು ಸಹಿಸಿಕೊಳ್ಳುವ ಶಕ್ತಿಯುಳ್ಳ ಕಿರುಧಾನ್ಯಗಳನ್ನು ಬೆಳೆದು ಜನರು ಜೀವನ ಸಾಗಿಸುತ್ತಿದ್ದಾರೆ. ಚೀನಾದ ಮಂಗೋಲಿಯ ಪ್ರಾಂತ್ಯದಲ್ಲೂ ಕೂಡ ಇಂತಹದೇ ಬದುಕನ್ನು ನಾವು ಕಾಣಬಹುದು. ಋತುಮಾನಗಳಿಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಈ ಜನತೆ ವಲಸೆ ಹೋಗುವುದುಂಟು. ಜೊತೆಗೆ ತಾವು ವಾಸಿಸುವ ಸ್ಥಳದಲ್ಲಿ ಬೀಳುವ ಅಲ್ಪ ಮಳೆಯನ್ನು ಸಂಗ್ರಹಿಸಿ ಜೀವನ ಸಾಗಿಸುವ ಕಲೆಯನ್ನೂ ಇವರು ಬಲ್ಲರು.

ಭಾರತದ ರಾಜಸ್ಥಾನ, ಗುಜರಾತ್, ದಕ್ಷಿಣ ಇಸ್ರೇಲ್ ಭಾಗದ ನೆಬೇಟಿಯನ್ ಜನಾಂಗ ಮಳೆ ನೀರು ಸಂಗ್ರಹದಲ್ಲಿ ಸಿದ್ಧಹಸ್ತರು. ಇಸ್ರೇಲ್ ಜನತೆ ಮಳೆನೀರು ಆಧಾರಿತ ಕೃಷಿಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಸಾವಿರದ ಮುನ್ನೂರು ವರ್ಷಗಳ ಇತಿಹಾಸವಿದೆ. ಈ ಪ್ರದೇಶದಲ್ಲಿ ಕನಿಷ್ಟ ನೂರು ಮಿಲಿ ಮೀಟರ್ ಮಳೆ ಬಿದ್ದರೂ ಇಲ್ಲಿನ ಜನ ಬೇಸಾಯ ಮಾಡಬಲ್ಲರು. ಜಗತ್ತಿಗೆ ಹನಿ ನೀರಾವರಿ ಪದ್ಧತಿ ಪರಿಚಯಿಸಿದ ಕೀರ್ತಿ ಇಲ್ಲಿನ ಜನತೆಗೆ ಸಲ್ಲುತ್ತದೆ.

ಎರಡು ಸಾವಿರ ವರ್ಷಗಳ ಹಿಂದೆ ಅಮೇರಿಕಾದ ನೈರುತ್ಯ ಭಾಗದ ಎತ್ತರ ಪ್ರದೇಶದಲ್ಲಿ ಬೀಳುತ್ತಿದ್ದ ಮಳೆ ನೀರನ್ನು ಮಣ್ಣಿನ ಕೊಳವೆ ಮೂಲಕ ಕೆಳಗಿನ ಪ್ರದೇಶಕ್ಕೆ ಸಾಗಿಸಿ ಅಲ್ಲಿನ ಮೂಲನಿವಾಸಿಗಳು ಬೇಸಾಯ ಮಾಡುತ್ತಿದ್ದುದು ಇತಿಹಾಸದಲ್ಲಿ ದಾಖಲಾಗಿದೆ. ಈ ಪದ್ಧತಿಗೆ ಅಲ್ಲಿನ ಜನ ಅನ್ಸೀಜಿ ಎಂದು ಕರೆಯುತಿದ್ದರು. ( ಸ್ಥಳೀಯ ಭಾಷೆಯಲ್ಲಿ ಪ್ರಾಚೀನವಾದದು ಎಂದರ್ಥ.)

ಆಪ್ರಿಕಾದ ಜನತೆ ಮೂರು ಸಾವಿರ ವರ್ಷಗಳ ಹಿಂದೆ ನದಿ ತೀರದಲ್ಲಿ 12 ರಿಂದ 15 ಅಡಿ ಎತ್ತರ ಬೆಳೆಯುತ್ತಿದ್ದ ಭತ್ತದ ಬೇಳೆ ತೆಗೆಯುತಿದ್ದರು. ಇತ್ತೀಚಿಗಿನ 10 ವರ್ಷಗಳ ಹಿಂದೆ ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲೂ 6 ಅಡಿ ಎತ್ತರದ ಭತ್ತದ ಬೆಳೆ ತೆಗೆಯುವ ಪದ್ಧತಿ ಚಾಲ್ತಿಯಲ್ಲಿತ್ತು.

ಭಾರತದ ರಾಜಸ್ಥಾನದ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಮಳೆ ನೀರನ್ನು ಸಂಗ್ರಹಿಸುವ ವೈವಿಧ್ಯಮಯ ವಿಧಾನಗಳಿವೆ. ರಾಜಸ್ಥಾನದ ಜೋಧಪುರ, ಜೈಪುರ, ಜೈಸಲ್ಮೇರ್, ಉತ್ತರ ಪ್ರದೇಶದ ಗ್ವಾಲಿಯರ್, ಮಹರಾಷ್ಟ್ರದ ಔರಂಗಬಾದ್, ದೌಲತಬಾದ್ ಮುಂತಾದ ನಗರಗಳ ಎತ್ತರ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೋಟೆಗಳಲ್ಲಿ ಅಂದಿನ ರಾಜರು ಮಳೆ ನೀರು ಸಂಗ್ರಹಕ್ಕೆ ಮಾಡಿದ್ದ ವ್ಯವಸ್ಥೆಗಳು ಇಂದಿಗೂ ನಮಗೆ ಮಾದರಿಯಾಗಬಲ್ಲವು.

ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಕಾಡೀಸ್ ಎಂಬ ಪದ್ಧತಿಯಲ್ಲಿ ಇಳಿಜಾರು ಪ್ರದೇಶದಲ್ಲಿ 4 ರಿಂದ  5ಅಡಿ ಎತ್ತರದ ದಿಬ್ಬಗಳನ್ನು ನಿರ್ಮಿಸಿ ಮಳೆನೀರು ಸಂಗ್ರಹಿಸಿ ಬೇಸಾಯ ಮಾಡುವ ವೃತ್ತಿ ಈಗಲೂ ಚಾಲ್ತಿಯಲ್ಲಿದೆ. ಮಳೆನೀರಿಗೆ ಕೊಚ್ಚಿಹೋಗದಂತೆ ದಿಬ್ಬಗಳ ಮೇಲೆ ಗಿಡ ಮರಗಳನ್ನು ಬೆಳಸಿರುವುದರಿಂದ ಒಂದಿಷ್ಟು ಹಸಿರು ಸಹ ಕಾಣತೊಡಗಿದೆ.

1970 ರಲ್ಲಿ ಈ ಪ್ರದೇಶಕ್ಕೆ ಇಂದಿರಾಗಾಂಧಿ ನಾಲುವೆ ಹರಿದ ಪ್ರಯುಕ್ತ ರೈತರು ತಮ್ಮ ದೇಶಿ ಕೃಷಿ ಕೈಬಿಟ್ಟರು. ಮತ್ತೇ 1986 ರಿಂದ ರೈತರು ದೇಶಿ ಕೃಷಿ ನೀರಾವರಿ ಪದ್ಧತಿಗೆ ಒಲವು ತೋರಿದ್ದು, ಸಹಕಾರ ತತ್ವದಡಿ ನದಿಗಳಿಗೆ ಸಣ್ಣ ಮಟ್ಟದ ಅಣೆಕಟ್ಟುಗಳನ್ನು ಸ್ವಂತ   ಖರ್ಚಿನಲ್ಲಿ ನಿರ್ಮಿಸಿಸಕೊಂಡು 100 ರಿಂದ 250 ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸಿ ಯಶಸ್ವಿಯಾಗಿದ್ದಾರೆ. ಪರಿಸರ ಪ್ರೇಮಿ ಹಾಗೂ ನೈಸ ರ್ಗಿಕ ನೀರಿನ ತಜ್ಞ ಡಾ. ರಾಜೇಂದ್ರಸಿಂಗ್ ನೇತೃತ್ವದಲ್ಲಿ ಅಲ್ಲಿನ ರೈತರು ಇಡೀ ಭಾರತಕ್ಕೆ ಮಾದರಿಯಾಗಿದ್ದಾರೆ.

(ಮುಂದುವರೆಯುವುದು)

(ಚಿತ್ರಕೃಪೆ: ವಿಕಿಪೀಡಿಯ)