ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಕಥನಕ್ಕೊಂದು ಮುನ್ನುಡಿ

-ಡಾ. ಜಗದೀಶ್ ಕೊಪ್ಪ

ಕಳೆದ ಒಂದು ವರ್ಷದಿಂದ ನನ್ನನ್ನು ಕಾಡುತ್ತಾ ಬರೆಯದೆ ಉಳಿದಿದ್ದ ಜಗತ್ ಪ್ರಸಿದ್ಧ ಬೇಟೆಗಾರ ಜಿಮ್ ಕಾರ್ಬೆಟ್‌ನ ಕಥನಕ್ಕೆ ಈಗ ಕಾಲ ಕೂಡಿ ಬಂದಿದು ಈಗ ಕೈ ಹಾಕಿದ್ದೇನೆ. ಕನ್ನಡಕ್ಕೆ ಜಿಮ್ ಕಾರ್ಬೆಟ್ ಹೊಸಬನೇನಲ್ಲ. “ರುದ್ರ ಪ್ರಯಾಗದ ನರಭಕ್ಷಕ” ಎಂಬ ರೋಮಾಂಚನ ಕಥನದ ಮೂಲಕ ತೇಜಸ್ವಿ ಕನ್ನಡಿಗರಿಗೆ ಪರಿಚಯಿಸಿದ್ದಾರೆ.

ನಾನಿಲ್ಲಿ ಬರೆಯುತ್ತಿರುವುದು ಆತನ ಶಿಖಾರಿ ಕಥೆಗಳನ್ನಲ್ಲ. ಕಾರ್ಬೆಟ್‌ನ ಬದುಕು, ಬಾಲ್ಯ, ಭಾರತ ಹಾಗೂ ಇಲ್ಲಿನ ಜನರ ಬಗ್ಗೆ ಆತನಿಗೆ ಇದ್ದ ಅನನ್ಯ ಪ್ರೀತಿ, ನಿಸರ್ಗ ಕುರಿತಾದ ಅವನ ಅಸಾಮಾನ್ಯ ಜ್ಙಾನ, ಇವುಗಳ ಕುರಿತಾಗಿ.ಮಾತ್ರ. ಭಾರತದಲ್ಲೇ ಹುಟ್ಟಿ, ಬೆಳೆದರೂ ಕೂಡ, ಭಾರತಕ್ಕೆ ಸ್ವಾತಂತ್ರ್ಯ ಹತ್ತಿರವಾಗುತಿದ್ದಂತೆ ಬ್ರಿಟೀಷರ ಬಗ್ಗೆ ಇಲ್ಲಿನ ಜನರಿಗೆ ಇದ್ದ ದ್ವೇಷಕ್ಕೆ ಹೆದರಿ ತಾನು ಬದುಕಿ ಬಾಳಿದ ನೈನಿತಾಲ್ ಗಿರಿಧಾಮದ ಸಮೀಪದ ಕಲದೊಂಗಿ ಮನೆಯನ್ನು ಹಳ್ಳಿಯವರ ವಶಕ್ಕೆ ಒಪ್ಪಿಸಿ ತಲ್ಲಣ ಮತ್ತು ತಳಮಳಗಳೊಂದಿಗೆ ತನ್ನ ಅವಿವಾಹಿತ ಸಹೋದರಿಯೊಂದಿಗೆ ದೇಶ ತೊರೆದ ದುರ್ದೈವಿ. ಇವತ್ತಿಗೂ ಆ ಹಳ್ಳಿಯ ಜನ ಕಾರ್ಪೆಟ್ ಸಾಹೇಬ ( ಸ್ಥಳೀಯರು ಆತನನ್ನು ಕರೆಯುತಿದ್ದುದು ಹಾಗೆ) ಬರುತ್ತಾನೆಂದು ಆತನ ಐದು ಎಕರೆ ವಿಸ್ತೀರ್ಣದ ಮನೆಯನ್ನ ಜತನದಿಂದ ಕಾಯುತಿದ್ದಾರೆ. ( ಪಕ್ಕದ ಚಿತ್ರದಲ್ಲಿರುವ ಮನೆ)

ಉತ್ತರಾಂಚಲದಲ್ಲಿ ವಿಶೇಷವಾಗಿ ನೈನಿತಾಲ್, ಅಲ್ಮೋರ, ರಾಮ್‌ನಗರ್, ಕಥಮ್‌ಗೊಡ, ರುದ್ರಪ್ರಯಾಗ, ಹೃಷಿಕೇಶ, ಚೋಟಹಲ್ದಾನಿ, ಕಲದೊಂಗಿ ಮುಂತಾದ ಪ್ರದೇಶಗಳಲ್ಲಿ ಇವತ್ತಿಗೂ ದಂತಕಥೆಯಾಗಿರುವ ಕಾರ್ಬೆಟ್‌ನ ಕಥನಕ್ಕಾಗಿ ಕಳೆದ ವರ್ಷ 16 ದಿನಗಳಲ್ಲಿ 28 ಸಾವಿರ ಚದುರ ಕಿಲೋಮೀಟರ್ ಹುಚ್ಚನಂತೆ ಅಲೆದು ಸಂಗ್ರಹಿಸಿದ ಮಾಹಿತಿ ಹಾಗೂ ಆತನೇ ಬರೆದ ಬಾಲ್ಯ ಮತ್ತು ಭಾರತದ ಅನುಭವಗಳನ್ನ ಇದೀಗ ಸರಣಿ ಲೇಖನಗಳ ಮುಖಾಂತರ ನಿಮ್ಮ ಮುಂದೆ ಇಡುತಿದ್ದೇನೆ. ( ಜನವರಿ ಮೊದಲ ವಾರದಿಂದ “ವರ್ತಮಾನ.ಕಾಮ್” ಅಂತರ್ಜಾಲತಾಣದಲ್ಲಿ ಪ್ರಕಟವಾಗಲಿದೆ.)

ನನಗೆ ಕಾರ್ಬೆಟ್ ಕುರಿತು ಗುಂಗು ಹಿಡಿಸಿದವರು, ನನ್ನ ಪ್ರೀತೀಯ ಮೇಷ್ಟರಾದ ಪಿ.ಲಂಕೇಶ್. ಅವು 1993ರ ಮಳೆಗಾಲದ ನಂತರದ ದಿನಗಳು. ಆವಾಗ ಪ್ರತಿ ಬುಧವಾರ ಲಂಕೇಶ್ ಪತ್ರಿಕೆ ಮುದ್ರಣವಾಗಿ ಗುರುವಾರ ನಾಡಿನೆಲ್ಲೆಡೆ ದೊರೆಯುತಿತ್ತು. ಬುಧವಾರ ಬೆಳಿಗ್ಗೆ 11 ಘಂಟೆಗೆ ಸರಿಯಾಗಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಸಂಜೆವಾಣಿ ಪತ್ರಿಕೆಯ ಕಛೇರಿಗೆ ಶಿಷ್ಯ ಬಸವರಾಜು ಜೊತೆ ಬರುತಿದ್ದ ಮೇಷ್ಟ್ರು ಮಾಲಿಕ ಮಣಿ ಮತ್ತು ಅವರ ಮಗ ಅಮುದಮ್  ಜೊತೆ ಮಾತನಾಡಿ ಚಹಾ ಕುಡಿದು ಪತ್ರಿಕೆಯನ್ನ ಮುದ್ರಣಕ್ಕೆ ಕಳಿಸಿ ನಂತರ ಮಧ್ಯಾಹ್ನ 2 ಗಂಟೆವರೆಗೆ ಪ್ರೆಸ್‌ಕ್ಲಬ್ ನಲ್ಲಿ ಬಿಯರ್ ಕುಡಿಯುತ್ತಾ ಕುಳಿತು ಕೊಳ್ಳುವುದು ವಾಡಿಕೆಯಾಗಿತ್ತು. ಆ ದಿನಗಳಲ್ಲಿ ತೇಜಸ್ವಿಯವರ ರುದ್ರಪ್ರಯಾಗದ ನರಭಕ್ಷಕ ಲೇಖನ ಮಾಲೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.

ಒಮ್ಮೆ ಅನಿರಿಕ್ಷಿತವಾಗಿ ಕ್ಲಬ್‌ನಲ್ಲಿ ಸಿಕ್ಕ ಲಂಕೇಶರ ಜೊತೆ ಕಾರ್ಬೆಟ್‌ನ ಸಾಹಸ ಕುರಿತು ಪ್ರಸ್ತಾಪಿಸಿದೆ. ಆ ದಿನ ತುಂಬಾ ಒಳ್ಳೆಯ ಮೂಡ್‌ನಲ್ಲಿ ಇದ್ದ ಅವರು ನನಗೆ ಅರ್ಧ ಘಂಟೆ ಕಾರ್ಬೆಟ್ ಕುರಿತು ಉಪದೇಶ ಮಾಡಿದರು. ಅವರ ಮಾತಿನ ದಾಟಿ ಹೀಗಿತ್ತು:

“ಇಲ್ಲ ಕಣೊ ಇಡೀ ಜಗತ್ತು ಅವನನ್ನ ಅದ್ಭುತ ಶಿಖಾರಿಕಾರ ಎಂದು ತಿಳಿದುಕೊಂಡಿದೆ. ಆದರೆ ನಿಜಕ್ಕೂ ಕಾರ್ಬೆಟ್ ಅದನ್ನೂ ಮೀರಿದ ನಿಸರ್ಗಪ್ರೇಮಿ. ಜೀವ ಜಾಲಗಳ ನೈಜ ಚಟುವಟಿಕೆಗಳ ಬಗ್ಗೆ ಅವನಿಗೆ ಇದ್ದ ಅರಿವು ಜಗತ್ತಿನಲ್ಲಿ ಯಾರಿಗೂ ಇರಲಿಲ್ಲ. ಪ್ರಾಣಿ ಹಾಗೂ ಪಕ್ಷಿಗಳ ಚಲನ ವಲನ ಅವುಗಳ ಅಭಿವ್ಯಕ್ತಿಯ ಬಾಷೆ ಇವುಗಳನ್ನ ಆತ ಅರಿತಿದ್ದ. ಕಾಡಿನಲ್ಲಿ ದಿಕ್ಕು ತಪ್ಪಿ ಹೋದರೆ ಅರಳಿ ನಿಂತಿರುವ ಹೂಗಳು ಯಾವ ದಿಕ್ಕಿಗೆ ಮುಖ ಮಾಡಿ ನಿಂತಿವೆ ಎಂಬುದರ ಮೇಲೆ ದಿಕ್ಕುಗಳನ್ನು ಗುರುತಿಸುವ ಶಕ್ತಿ ಅವನಲ್ಲಿತ್ತು. ಸೊಳ್ಳೆ ಅಥವಾ ಕ್ರಿಮಿ ಕೀಟಗಳ ಕಡಿತದಿಂದ ತಪ್ಪಿಸಿಕೊಳ್ಳಲು ಯಾವ ಸೊಪ್ಪಿನ ರಸವನ್ನು ಮೈಗೆ ಲೇಪಿಸಿಕೊಳ್ಳಬೇಕು, ದೀರ್ಘಾವಧಿ ಕಾಲ ಕಾಡಿನಲ್ಲಿರುವ ಸಂದರ್ಭದಲ್ಲಿ ಹಸಿವು, ನೀರಡಿಕೆ ಹೋಗಲಾಡಿಸಲು ಯಾವ ಹಣ್ಣು, ಯಾವ ಬೇರು ತಿನ್ನಬೇಕು ಇವಗಳ ಬಗ್ಗೆ ಕಾರ್ಬೆಟ್‌ಗೆ ಅಪಾರ ಜ್ಞಾನವಿತ್ತು. ಈ ಕಾರಣಕ್ಕಾಗಿ ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಜಪಾನ್ ವಿರುದ್ಧ ಹೊರಾಡುವ ಸಂದರ್ಭದಲ್ಲಿ, ಬ್ರಿಟೀಷ ನೇತೃತ್ವದ ಭಾರತೀಯ ಸೇನೆ ಬರ್ಮಾ ದೇಶದ ಕಾಡಿನಲ್ಲಿ ಹೋರಾಟ ನಡೆಸುತಿದ್ದಾಗ ಸೈನಿಕರಿಗೆ ಕಾರ್ಬೆಟ್ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ.” ಹೀಗೆ ಕಾರ್ಬೆಟ್ ಕುರಿತಂತೆ ರೊಮಾಂಚಕಾರಿ ಕಥೆಯ ಮಹಾಪೂರವನ್ನೇ ಹರಿಸಿದ ಲಂಕೇಶರು ಆತನ ಕೃತಿಗಳ ಕುರಿತಂತೆ ಮಾಹಿತಿಯನ್ನ ನನಗೆ ಒದಗಿಸಿದರು. ಮುಂದಿನ ವಾರ ಅಚ್ಚರಿ ಎಂಬಂತೆ ಈ ಬಗ್ಗೆ ಪತ್ರಿಕೆಯಲ್ಲಿ ಮರೆಯುವ ಮುನ್ನ ಎಂಬ ಕಾಲಂ ನಲ್ಲಿ ಬರೆದರು.

ಈ ಘಟನೆ ಮತ್ತೆ ನನಗೆ ನೆನಪಾದ್ದು 2009 ಅಕ್ಟೋಬರ್‌ನಲ್ಲಿ. ಆ ಅಕ್ಟೋಬರ್ 5 ನೇ ತಾರೀಖು ಮಂಡ್ಯದಲ್ಲಿ ನನ್ನ ಅತ್ತಿಗೆ ಅನಿರೀಕ್ಷಿತವಾಗಿ ತೀರಿಹೋದರು. 6 ರಂದು ಅವರ ಅಂತ್ಯಕ್ರಿಯೆ ಮುಗಿಸಿ ನಾನು, ನನ್ನ ಮಕ್ಕಳು ಧಾರವಾಡಕ್ಕೆ ವಾಪಾಸಾಗುತಿದ್ದ ಸಂದರ್ಭದಲ್ಲಿ ರೈಲಿನಲ್ಲಿ ಓದಲು ಇರಲಿ ಎಂಬ ಉದ್ದೇಶದಿಂದ ಸ್ಟೇಶನ್ ನಲ್ಲಿ ಮಯೂರ, ಸುಧಾ, ಲಂಕೇಶ್ ಪತ್ರಿಕೆಯನ್ನು ತೆಗೆದುಕೊಂಡೆ. ಅವರಿಬ್ಬರಿಗೂ ಸುಧಾ, ಮಯೂರ ಕೊಟ್ಟು ನಾನು ಲಂಕೇಶ್ ಪತ್ರಿಕೆಯ ಪುಟ ತೆರದಾಗ ಆ ವಾರದ ಸಂಚಿಕೆಯಲ್ಲಿ ಮೇಷ್ಟ್ರು ಕಾರ್ಬೆಟ್ ಕುರಿತು ಬರೆದಿದ್ದ ಅಂಕಣ ಮತ್ತೆ ಪ್ರಕಟವಾಗಿತ್ತು.  ಬದುಕಿನ ಜಂಜಾಟದಲ್ಲಿ ಜಿಮ್ ಕಾರ್ಬೆಟ್‌ನನ್ನು ನಾನು ಮರೆತಿದ್ದರ ಬಗೆ ಆ ಕ್ಷಣದಲ್ಲಿ ಬೇಸರ ಮೂಡಿತು. ಬೆಳಿಗ್ಗೆ 6 ಘಂಟಗೆ ಮನೆಗೆ ಬಂದವನೇ  ಮಾಡಿದ ಮೊದಲ ಕೆಲಸವೆಂದರೆ, ಅಂತರ್ಜಾಲದ ಮೂಲಕ ಅವನ ಎಲ್ಲಾ ಕೃತಿಗಳ ವಿವರ ತೆಗೆದು ಆ ಕ್ಷಣವೇ ಪೆಂಗ್ವಿನ್ ಪ್ರಕಾಶನ ಮತ್ತು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ಗೆ ಆರ್ಡರ್ ಮಾಡಿದೆ. ಒಂದು ವಾರದಲ್ಲಿ ಕಾರ್ಬೆಟ್ ಬರೆದ “ಮೈ ಇಂಡಿಯಾ”, “ಜಂಗಲ್ ಲೋರ್”, “ಮ್ಯಾನ್ ಈಟರ್ಸ್ ಆಫ್ ಕುಮಾವನ್”, “ದ ಮ್ಯಾನ್ ಈಟಿಂಗ್ ಲೆಪಾರ್ಡ್ ಆಪ್ ರುದ್ರಪ್ರಯಾಗ್”, “ದ ಟೆಂಪಲ್ ಟೈಗರ್ ಅಂಡ್ ಮೋರ್ ಮ್ಯಾನ್ ಈಟರ್ಸ್ ಆಪ್ ಕುಮಾವನ್”, “ಟ್ರೀ ಟಾಪ್” ಮತ್ತು ಕಾರ್ಬೆಟ್ ಬಗ್ಗೆ ಬ್ರಿಟೀಷ್ ಲೇಖಕ ಮತ್ತು ಪತ್ರಕರ್ತ ಮಾರ್ಟಿನ್ ಬೂತ್ ಬರೆದ “ಕಾರ್ಪೆಟ್ ಸಾಹೇಬ್” ಕೃತಿಗಳು ನನ್ನ ಕೈ ಸೇರಿದವು.

ಒಂದು ತಿಂಗಳ ಕಾಲ ರಾತ್ರಿ ವೇಳೆ ಅವುಗಳನ್ನ ಓದಿ ಮುಗಿಸಿದ ತಕ್ಷಣ ನಾನೊಂದು ನಿರ್ಧಾರಕ್ಕೆ ಬಂದೆ. ಆಪ್ತವಾಗಿ ಕಾರ್ಬೆಟ್‌ನ ವ್ಯಕ್ತಿ ಚಿತ್ರವನ್ನು ಕನ್ನಡದಲ್ಲಿ ಕಟ್ಟಿಕೊಡಬೇಕು ಎಂದು. ಕೇವಲ ಪುಸ್ತಕ ಓದಿ ಆತನ ಬಗ್ಗೆ ಬರೆಯುವ ಬದಲು ಆತ ನಡೆದಾಡಿದ ನೆಲ, ಒಡನಾಡಿದ ಜನರನ್ನ ಕಂಡು ಬಂದು ಬರೆದರೆ ಉತ್ತಮ ಎಂದು ಅನಿಸಿದಕೂಡಲೆ, ಕಳೆದ ವರ್ಷ ಪೆಬ್ರವರಿ ತಿಂಗಳಿನಲ್ಲಿ ನಾನು ಅವನ ನೆಲದಲ್ಲಿದ್ದೆ. ಅಲ್ಲಿ ನಾನು ಅನುಭವಿಸಿದ ಸಂತಸ, ನೋವು, ಎಲ್ಲವನ್ನು ಕೃತಿಯಲ್ಲಿ ದಾಖಲಿಸಿದ್ದೇನೆ. ಮೊದಲ ಏಳು ಅಥವಾ ಎಂಟು ಅಧ್ಯಾಯಗಳಲ್ಲಿ ಅವನ ಬದಕಿನ ಚಿತ್ರಣ, ತಲ್ಲಣಗಳಿದ್ದರೆ, ಮುಂದಿನ ಅಧ್ಯಾಯಗಳಲ್ಲಿ ಅವನು ಕಂಡ ಭಾರತ ಮತ್ತು ಇಲ್ಲಿನ ಜನರ ಬಗ್ಗೆ ಪ್ರೀತಿಯನ್ನ ಅವನ ಮಾತುಗಳಲ್ಲೇ ದಾಖಲಿಸಿದ್ದೇನೆ. ಅವನ ಹೃದಯವಂತಿಕೆಗೆ ಅವನ ಈ ಮಾತು ಸಾಕ್ಷಿಯಾಗಿದೆ: “ಭಾರತದ ಜನರಲ್ಲಿ ಬಡತನವಿದೆ, ಅಜ್ಞಾನವಿದೆ, ನಿಜ. ಆದರೆ ಅವರಷ್ಟು ಪ್ರ್ರಾಮಾಣಿಕರು, ನಂಬಿದವರನ್ನು ಕೈಬಿಡದ ಹೃದಯವಂತರು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ.” ಇದು ಸುಮಾರು 75 ವರ್ಷಗಳ ಹಿಂದೆ ಆತ ಆಡಿದ ಮಾತು. ಅವನ ನಂಬಿಕೆಯನ್ನ ನಿಜವಾಗಿಸುವಂತೆ ಅವನು ಬದುಕಿದ್ದ ಕಲದೊಂಗಿಯ ಹಳ್ಳಿಯ ಜನ ಬಂಗಲೆಯನ್ನು, ಅವನು ಬಳಸುತಿದ್ದ ಕುರ್ಚಿ, ಮೇಜು, ಸಮವಸ್ತ್ರ ಹಾಗೂ ಲಾಟೀನು ಇನ್ನಿತರೆ ವಸ್ತುಗಳನ್ನ ಜೋಪಾನದಿಂದ ಕಾಪಾಡಿದ್ದಾರೆ. ಐದು ಎಕರೆ ವಿಸ್ತೀರ್ಣದ ಅವನ ಬಂಗಲೆ, ಅಲ್ಲಿನ ಗಿಡ ಮರ, ಹಸಿರು, ಪಕ್ಷಿಗಳ ಕಲರವ ಎಲ್ಲವೂ ನಮ್ಮನ್ನು ಅವನ ಪ್ರಕೃತಿಯ ಲೋಕಕ್ಕೆ ಕರೆದೊಯ್ಯುತ್ತವೆ.

ನೈನಿತಾಲ್ ಗಿರಿಧಾಮಕ್ಕೆ ಹೋಗುವ ರಸ್ತೆಯಲ್ಲಿ ಈ ಹಳ್ಳಿ ಇರುವುದರಿಂದ  ಕಾರ್ಬೆಟ್ ಬಗ್ಗೆ ತಿಳಿದ ಪ್ರವಾಸಿಗರು ಇಲ್ಲಿ ಬೇಟಿ ನೀಡುತ್ತಾರೆ.  ಪ್ರತಿ ಪ್ರವಾಸಿಗನಿಗೂ ಸಿಹಿ ಮೊಸರು (ಲಸ್ಸಿ) ನೀಡಿ ಸ್ವಾಗತಿಸುವ ಆ ಹಳ್ಳಿಯ ಹೆಣ್ಣು ಮಕ್ಕಳ ಪ್ರೀತಿ ತಾಯಿತನದಿಂದ ಕೂಡಿರುವುದು ವಿಶೇಷ.

One thought on “ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಕಥನಕ್ಕೊಂದು ಮುನ್ನುಡಿ

  1. suma embar

    Dear Sir, I am so happy that Dr. Jagadish Koppa is bringing out a series on Jim Karbet. Karbet was an extraordinary soul- who caught the spirit of India and became one with it.
    His British sense of humour and celebration of the rural ethos ; have combined to create a unique style of narration.
    To introduce Karbet to kannada readers is a challenge, and quite rewarding. All the best to Dr jagadish Koppa, who has done a lot of field work about Karbet.

    Reply

Leave a Reply

Your email address will not be published. Required fields are marked *